ಉಚಿತ ಲಸಿಕೆ ಆಶ್ವಾಸನೆ ಈಡೇರಲಿ

ಹಾಸನ: ಜೂನ್ 21ರಿಂದ ದೇಶದ 18 ವರ್ಷ ಮೇಲ್ಪಟ್ಟವರಿಗೆಲ್ಲ ಉಚಿತ ಲಸಿಕೆ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಆಶ್ವಾಸನೆ ಅಷ್ಟೇ. ಅದರ ಬದಲು ಕೆಲಸ ಮಾಡಿ ತೋರಿಸಲಿ ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಕೊರೊನಾ ಲಸಿಕೆಗಾಗಿ ಕಳೆದ ಬಜೆಟ್ನಲ್ಲಿ ₹35 ಸಾವಿರ ಕೋಟಿ ಮೀಸಲಿಟ್ಟರು. ಆ ಹಣ ಎಲ್ಲಿಗೆ ಹೋಯಿತು, ಎಷ್ಟು ಜನರಿಗೆ ಲಸಿಕೆ ಕೊಟ್ಟಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ ಎಂದು ಮಂಗಳವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಪ್ರಧಾನಿ ಕೇವಲ ಘೋಷಣೆ ಮಾಡುತ್ತಿದ್ದಾರೆ. ಇಂತಹ ಆಶ್ವಾಸನೆಗಳನ್ನು ಬಹಳಕೇಳಿದ್ದೇವೆ. ರಾಜ್ಯದಲ್ಲಿ ನಿತ್ಯ 15 –18 ಸಾವಿರ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ. ಕೊರೊನಾ ಸಂಪೂರ್ಣ ತೊಲಗಿತು ಎಂದು ಭಾವಿಸಿ ಅನ್ಲಾಕ್ ಮಾಡಿದರೆ ಜನಸಂಚಾರ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸಾಧ್ಯತೆಯಿದೆ. ಆದ್ದರಿಂದ ಇನ್ನಷ್ಟು ದಿನ ಲಾಕ್ಡೌನ್ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಹಾಸನದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿಲ್ಲ. ನಿತ್ಯ 10 ರಿಂದ 15 ಜನ ಮೃತಪಡುತ್ತಿದ್ದಾರೆ. ಎಲ್ಲರಿಗೂ ಕೋವಿಡ್ ಪರೀಕ್ಷೆ ಮಾಡುತ್ತಿಲ್ಲ. ರೋಗ ಲಕ್ಷಣ ಇದ್ದವರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಸರಿಯಾಗಿ ಪರೀಕ್ಷೆ ನಡೆದರೆ ಪಾಸಿಟಿವಿಟಿ ದರ ಇನ್ನೂ ಹೆಚ್ಚುತ್ತದೆ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಬಿಜೆಪಿಯವರೇ ಮಾತನಾಡುತ್ತಿದ್ದಾರೆ. ಸಿ.ಎಂ ಬದಲಾಗುತ್ತಾರೆಯೇ ಎಂಬ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ? ಯಾರನ್ನು ಬೀಳಿಸಬೇಕು, ಯಾರನ್ನು ಏಳಿಸಬೇಕು ಎನ್ನುವುದು ಅವರಿಗೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.