ಹಾಸನ: ಮಾರ್ಚ್ 1 ರಂದು ಮೃತಪಟ್ಟಿದ್ದ ಆಲೂರು ತಾಲ್ಲೂಕಿನ 78 ವರ್ಷದ ವೃದ್ಧರೊಬ್ಬರ ದೇಹದಲ್ಲಿ ಎಚ್3ಎನ್2 ವೈರಾಣು ಪತ್ತೆಯಾಗಿದೆ. ಎಚ್3ಎನ್2 ವೈರಾಣುವಿನಿಂದ ದೇಶದಲ್ಲಿ ಸಂಭವಿಸಿದ ಮೊದಲ ಸಾವಿನ ಪ್ರಕರಣ ಇದಾಗಿದ್ದು, ಆತಂಕಕ್ಕೆ ಕಾರಣವಾಗಿದೆ.
ಆಲೂರು ತಾಲ್ಲೂಕಿನ ವೃದ್ಧರೊಬ್ಬರು ಜ್ವರ, ಗಂಟಲು ನೋವು, ಕೆಮ್ಮಿನಿಂದ ಬಳಲುತ್ತಿದ್ದರು. ಮಾದರಿಯನ್ನು ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಆದರೆ, ಆ ವೃದ್ಧ ಮಾ.1ರಂದು ಮೃತಪಟ್ಟಿದ್ದು, ಮೃತರಿಗೆ ಎಚ್3ಎನ್2 ಇರುವುದು ಇದೀಗ ದೃಢವಾಗಿದೆ.
ಗ್ರಾಮದ ಸುತ್ತಲಿನ ಹಳ್ಳಿಗಳಲ್ಲಿ ಹೆಚ್ಚಿನ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. ಅನಾರೋಗ್ಯ ಪೀಡಿತರು ಹಾಗೂ ಇತರ ಕಾಯಿಲೆಗಳು ಇರುವವರನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ. ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಿವಸ್ವಾಮಿ ಮಾಹಿತಿ ನೀಡಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಎಚ್3ಎನ್2 ಪತ್ತೆಯಾಗಿದ್ದು, ರಾಜ್ಯದಲ್ಲಿ 50ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಹಾಸನದಲ್ಲಿ ಆರು ಮಂದಿಯಲ್ಲಿ ಈ ವೈರಸ್ ಪತ್ತೆಯಾಗಿದೆ. ಕೋವಿಡ್ ನಂತರ ಆತಂಕ ಮೂಡಿಸಿರುವ ಈ ವೈರಾಣುವಿನಿಂದ ಬಗ್ಗೆ ಕಾಯಿಲೆ ಇರುವವರು ಹಾಗೂ ಹಿರಿಯ ನಾಗರಿಕರಿಗೆ ಹೆಚ್ಚಿನ ಆತಂಕವಿದ್ದು, ಎಚ್ಚರದಿಂದ ಇರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.
ಮಧುಮೇಹ ಮುಂತಾದ ಕಾಯಿಲೆಗಳು ಹಾಗೂ 60 ವರ್ಷ ಮೇಲಿನವರ ಮೇಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ. ಜ್ವರ ಕಾಣಿಸಿಕೊಂಡವರು ಸ್ವಯಂ ಚಿಕಿತ್ಸೆ ತೆಗೆದುಕೊಳ್ಳದೇ ವೈದ್ಯರನ್ನು ಭೇಟಿ ಮಾಡಲು ಸೂಚಿಸಲಾಗಿದೆ ವೈರಸ್ ಪತ್ತೆಯಾದ ಹಾಗೂ ಮೃತಪಟ್ಟ ವೃದ್ದರ ತೋಟದ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ 14 ದಿನ ಸತತ ತಪಾಸಣೆ ಮಾಡುವ ಕುರಿತು ಸೂಚನೆ ಬಂದಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ಶಿವಸ್ವಾಮಿ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.