ಹಾಸನ: ಹಾಸನಾಂಬ ದರ್ಶನಕ್ಕೆಂದು ಬಂದು ತಾಳಿಯನ್ನು ಕಳೆದುಕೊಂಡಿದ್ದ ಕೆ.ಆರ್. ನಗರ ತಾಲ್ಲೂಕಿನ ಸಾಲಿಗ್ರಾಮದ ರಮ್ಯಾ ಅವರ 5 ಗ್ರಾಂ ಚಿನ್ನದ ತಾಳಿಯು, ಗುರುವಾರ ಗುಡಿಯ ಹುಂಡಿ ಎಣಿಕೆ ವೇಳೆ ಪತ್ತೆಯಾಯಿತು.
ಉತ್ಸವದ ಸಂದರ್ಭದಲ್ಲಿ ತಾಳಿ ಕಳೆದುಕೊಂಡಿದ್ದ ಗೃಹಿಣಿಯು ಉಪ ವಿಭಾಗಾಧಿಕಾರಿ ಮಾರುತಿ ಅವರಿಗೆ ಮಾಹಿತಿ ನೀಡಿ ತೆರಳಿದ್ದರು. ತಾಳಿಯನ್ನು ಗುರುವಾರ ಅಧಿಕಾರಿಗಳು ಅವರಿಗೆ ಮರಳಿಸಿದರು.
ಹಾಸನಾಂಬ ಹುಂಡಿಯಲ್ಲಿ ₹2.50 ಕೋಟಿ ಸಂಗ್ರಹವಾಗಿದೆ. ಟಿಕೆಟ್, ಲಾಡು ಮಾರಾಟದಿಂದ ₹6.15 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಈ ವರ್ಷ ದಾಖಲೆಯ ₹8.72 ಕೋಟಿ ಆದಾಯ ಸಂಗ್ರಹವಾಗಿದೆ.
ಜೊತೆಗೆ 62 ಗ್ರಾಂ ಚಿನ್ನಾಭರಣ, 161 ಗ್ರಾಂ ಬೆಳ್ಳಿಯ ಆಭರಣಗಳು ಹುಂಡಿಯಲ್ಲಿ ಸಿಕ್ಕಿವೆ. ಇದೇ ಮೊದಲ ಬಾರಿಗೆ ಅಳವಡಿಸಿದ್ದ ಇ–ಹುಂಡಿಯಿಂದ ₹4.64 ಲಕ್ಷ ಸಂಗ್ರಹವಾಗಿದೆ.
ಭಕ್ತರು ವಿವಿಧ ಕೋರಿಕೆಗಳನ್ನು ಬರೆದು ದೇವಸ್ಥಾನದ ಹುಂಡಿಯಲ್ಲಿ ಹಾಕುತ್ತಾರೆ. ಈ ಕೋರಿಕೆಗಳ ಗೋಪ್ಯತೆ ಕಾಪಾಡಲೆಂದೇ ಕಳೆದ ವರ್ಷದಿಂದ ಪತ್ರಗಳನ್ನು ಓದದಂತೆ ದೇಗುಲದ ಆಡಳಿತ ಮಂಡಳಿ ನಿರ್ಧಾರ ಕೈಗೊಂಡಿದೆ.
ಹುಂಡಿಯಲ್ಲಿ ಸಿಕ್ಕ ಚಿನ್ನದ ತಾಳಿಯನ್ನು ರಮ್ಯಾ ಅವರಿಗೆ ಮರಳಿಸಲಾಯಿತು.