ಹಾಸನ: ಕೇಂದ್ರ ಕೃಷಿ ಮತ್ತು ರೈತರ ಅಭಿವೃದ್ಧಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೇತೃತ್ವದ ಜನಾಶೀರ್ವಾದ ಯಾತ್ರೆ ಆ.17 ರಂದು ಜಿಲ್ಲೆಗೆ ಆಗಮಿಸಲಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಸುರೇಶ್ ಹೇಳಿದರು.
ಈ ಬಾರಿ 12 ಮಹಿಳೆಯರನ್ನು ಒಳಗೊಂಡಂತೆ ಎಲ್ಲ ವರ್ಗದವರಿಗೂ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ನೂತನ ಸಚಿವರನ್ನು ಸಂಸತ್ತಿಗೆ ಪರಿಚಯಿಸುವ ವೇಳೆ ವಿರೋಧ ಪಕ್ಷಗಳು ಗದ್ದಲ ಮಾಡಿ ಅವಮಾನಮಾಡಿವೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚರ್ಚಿಸಿ,ಜನಾಶೀರ್ವಾದ ಪಡೆಯಲು ಸಚಿವರನ್ನು ಜನರ ಬಳಿಗೆ ಕಳುಹಿಸುತ್ತಿದ್ದಾರೆ. ಹಾಗಾಗಿ ಎಲ್ಲ ಸಚಿವರುಪ್ರವಾಸ ಮಾಡುತ್ತಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲೂ ಆ.16ರಿಂದ 19ರವರೆಗೆ ಪ್ರವಾಸ ಮಾಡಲಿದ್ದು, 17ರಂದು ಹೊಳೆನರಸೀಪುರ ಮಾರ್ಗವಾಗಿ ಜಿಲ್ಲೆಗೆ ಆಗಮಿಸುವ ಶೋಭಾ ಅವರು, ನಗರದ ಎಚ್ಎಂಟಿ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಾರ್ಗ ಮಧ್ಯೆ ಲಸಿಕಾ ಕೇಂದ್ರದ ಭೇಟಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಂತರ ಚಿಕ್ಕಮಗಳೂರಿಗೆ ತೆರಳುವರು ಎಂದು ಹೇಳಿದರು.
ಯಾತ್ರೆ ವೇಳೆ ರಸಗೊಬ್ಬರ ಅಂಗಡಿಗಳಿಗೆ ಭೇಟಿ ನೀಡುವುದು, ಸಾಹಿತಿಗಳು, ಯೋಧರು, ಬಿಜೆಪಿ ಮತ್ತು ಜನಸಂಘ ನಾಯಕರ ಮನೆಗೆ ಭೇಟಿ ನೀಡಿ ಆಶೀರ್ವಾದ ಪಡೆಯಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜಪಿ ಮುಖಂಡರಾದ ನವಿಲೆ ಅಣ್ಣಪ್ಪ, ಕಾಟಿಕೆರೆ ಪ್ರಸನ್ನ, ಎಚ್.ಎಂ.ವಿಶ್ವನಾಥ್, ರೇಣುಕುಮಾರ್, ಪ್ರಸನ್ನ ಕುಮಾರ್ ಇದ್ದರು.