ಹಾಸನ: ಅಧಿ ದೇವತೆ ಹಾಸನಾಂಬ ಜಾತ್ರಾ ಮಹೋತ್ಸವ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ದೇವಿಯ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.
ಜಿಲ್ಲಾಧಿಕಾರಿ ಆರ್.ಗಿರೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜಾರಾಂ ಹಾಗೂ ತಹಶೀಲ್ದಾರ್ ಶಿವಶಂಕರಪ್ಪ ಸಮ್ಮುಖದಲ್ಲಿ ಖಜಾನೆಯಿಂದ ಒಡವೆ ಪೆಟ್ಟಿಗೆಗಳನ್ನು ಹೊರ ತಂದು ಪುಷ್ಪಾಲಂಕೃತ ಅಡ್ಡ ಪಲ್ಲಕ್ಕಿ ಮೇಲೆ ಇಟ್ಟು ಪೂಜೆ ಸಲ್ಲಿಸಲಾಯಿತು. ಸಂಪ್ರದಾಯಂತೆ ಮಡಿವಾಳರು ಪಂಜು ಮತ್ತು ಮುತ್ತೈದೆಯರು ಆರತಿ ಬೆಳಗಿದರು.ಭಕ್ತರು ಹಾಸನಾಂಬೆಗೆ ಜೈಕಾರ ಹಾಕಿದರು.
ಬಿಗಿ ಪೊಲೀಸ್ ಬಂದೋ ಬಸ್ತ್ನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮಂಗಳ ವಾದ್ಯಗಳ ಸಮೇತ ಮೆರವಣಿಗೆ ಮಾಡುವ ಮೂಲಕ ಆಭರಣವನ್ನು ಹಾಸನಾಂಬೆ ದೇಗುಲಕ್ಕೆ ತರಲಾಯಿತು. ಸಂಪ್ರದಾಯದಂತೆ ಅಶ್ವಯುಜ ಮಾಸದ ಮೊದಲ ಗುರುವಾರವಾದ ನ. 5ರಂದು ಮಧ್ಯಾಹ್ನ12.30ಕ್ಕೆ ಬಾಗಿಲು ತೆರೆಯಲಾಗುತ್ತದೆ.
ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಅಧಿದೇವತೆ ಜಾತ್ರಾ ಮಹೋತ್ಸವ ಈ ಬಾರಿ ನ.5 ರಿಂದ 17ರವರೆಗೆ ನಡೆಯುತ್ತಿದ್ದರೂ ಕೋವಿಡ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಇರುವುದಿಲ್ಲ.
ಮೊದಲ ದಿನ ಜನಪ್ರತಿನಿಧಿಗಳು, ಗಣ್ಯರಿಗೆ ಮಾತ್ರ ದೇವಸ್ಥಾನದ ಒಳ ಪ್ರವೇಶಕ್ಕೆ ಅವಕಾಶ ಕಲ್ಲಿಸಲಾಗಿದೆ. ಸಾರ್ವನಿಕರ ಅನುಕೂಲಕ್ಕಾಗಿ ನಗರದ ಆಯ್ದ ಎಂಟು ಸ್ಥಳಗಳಲ್ಲಿ ಎಲ್ಇಡಿ ಪರದೆ ಅಳವಡಿಸಿ, ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.