ಭೂಮಿ ನಂಬಿದರೆ ಕೈ ಬಿಡುವುದಿಲ್ಲ

ಹಾಸನ: ‘ಭೂಮಿ ನಂಬಿದರೆ ಕೈ ಬಿಡುವುದಿಲ್ಲ. ಎಷ್ಟೋ ಜನ ಕೃಷಿಯಿಂದ ಸಾಕಷ್ಟು ಪಡೆದುಕೊಂಡಿದ್ದರೂ ಕೃಷಿಯನ್ನು ದೂಷಿಸುತ್ತಾರೆ’ ಎಂದು ಪುಣ್ಯಭೂಮಿ ಸಂಸ್ಥೆ ಗೌರವ ನಿರ್ದೇಶಕ ವಿಜಯ್ ಅಂಗಡಿ ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕಿನ ಗೌರಿಪುರ ಗ್ರಾಮದ ಪ್ರಗತಿಪರ ರೈತ ಮಹಿಳೆ ಹೇಮಾ ಅನಂತ್ ಅವರ ತೋಟದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾ ಸಂಸ್ಥೆಯ ‘ಬೆಳ್ಳಿ ಬದುಕು’ ಸಮಾರಂಭದಲ್ಲಿ ಮಾತನಾಡಿದರು.
‘ಕೃಷಿ ಲಾಭದಾಯಕವಲ್ಲ ಎಂದು ಹೇಳುವವರೇ ಹೆಚ್ಚು. ಆದರೆ, ಇತ್ತೀಚಿನ ದಿನಗಳಲ್ಲಿ ಪಟ್ಟಣಗಳಿಂದ ಅನೇಕರು ಹಿಂತಿರುಗಿ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. 1996ರಲ್ಲಿ ಆರಂಭವಾದ ಪುಣ್ಯಭೂಮಿ ಪರಿಸರ ಪ್ರಿಯ ಕೃಷಿಕರ ಸೇವಾ ಸಂಸ್ಥೆ, ಇಂದು 500ಕ್ಕೂ ಹೆಚ್ಚು ಮಂದಿ ಸದಸ್ಯರನ್ನು ಹೊಂದಿದೆ’ ಎಂದು ವಿವರಿಸಿದರು.
‘ಮಳೆ ನೀರು ಆರೋಗ್ಯಕ್ಕೆ ಒಳ್ಳೆಯದು. ಹಾಗಾಗಿ ಪ್ರತಿಯೊಬ್ಬರು ತಮ್ಮ ಮನೆಯಲ್ಲಿ ಮಳೆ ನೀರು ಸಂಗ್ರಹ ಘಟಕ ಅಳವಡಿಸಿಕೊಳ್ಳಬೇಕು. ಸೈಕಲ್ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯದ ಜೊತೆಗೆ ಹಣ
ಉಳಿತಾಯವಾಗಲಿದೆ. ಅಕ್ಕಿ, ಉಪ್ಪು, ಎಣ್ಣೆ ಬಳಕೆ ಕಡಿಮೆ ಮಾಡಿ, ರಾಗಿ ಹೆಚ್ಚು ಬಳಸಬೇಕು’ ಎಂದು ಸಲಹೆ
ನೀಡಿದರು.
ರೈತ ಮಹಿಳೆ ಹೇಮಾ ಅನಂತ್ ಮಾತನಾಡಿ, ‘ಹಲವು ವರ್ಷಗಳ ಹಿಂದೆ ಈ ಜಾಗದಲ್ಲಿ ಏನೂ ಇರಲಿಲ್ಲ. ಭೂಮಿ ತಾಯಿ ಕೈ ಹಿಡಿದಿದ್ದಾಳೆ. ನಮ್ಮ ಕೃಷಿ ಉತ್ಪನ್ನಗಳನ್ನು ಜನರು ಖರೀದಿಸುತ್ತಿದ್ದಾರೆ’ ಎಂದರು.
ಆಲೂರಿನ ರೈತ ಅರುಣ್ ಕುಮಾರ್ ಮಾತನಾಡಿ, ‘ಕಾಫಿ ತೋಟದಲ್ಲಿ ಕೆಂಪಿರುವೆ ಸಮಸ್ಯೆ ಇತ್ತು. ಪುಣ್ಯಭೂಮಿ ಸಹಕಾರದಿಂದ ಸೈನಿಕ ಇರುವೆ ಸಾಕಿದ ಪರಿಣಾಮ ಅನುಕೂಲವಾಗಿದೆ. ಅಲ್ಲದೆ ಕಾಫಿ ಗಿಡದಲ್ಲಿ ಬರುವ
ಬೋರ್ ಕಾಯಿಲೆಯೂ ನಿಯಂತ್ರಣವಾಗಿದೆ’ ಎಂದು ನುಡಿದರು.
ರೈತ ಮಾಲತೇಶ್ ಮಾತನಾಡಿ, ‘ಮಳೆ ನೀರು ಸಂಗ್ರಹ ಘಟಕ ಅಳವಡಿಕೆಗೆ ₹25 ಸಾವಿರದಿಂದ ₹30 ಸಾವಿರ ವೆಚ್ಚವಾಗಬಹುದು. ಸಂಗ್ರಹಿಸಿದ ನೀರನ್ನು ವರ್ಷವಿಡೀ ಬಳಸಬಹುದು. ತಾರಸಿಯಲ್ಲಿ ಸಣ್ಣಪುಟ್ಟ ತರಕಾರಿ
ಬೆಳೆಯಲಾಗುತ್ತಿದೆ’ ಎಂದರು.
ಹಾನುಬಾಳು ಹೋಬಳಿ ಹಂಜಗೋಡನಹಳ್ಳಿ ಕೃಷಿಕ ನರೇಶ್ ಮಾತನಾಡಿದರು.
85 ವರ್ಷದ ರೈತ ರಾಮಾಚಾರ್ ಅವರನ್ನು ಸನ್ಮಾನಿಸಲಾಯಿತು. ಹೇಮಾ ಅನಂತ್ ಅವರ ಪುತ್ರ ಆಕಾಶ್ ಮತ್ತು ವೈಡೂರ್ಯ ದಂಪತಿಗೆ ಮಾವಿನ ಗಿಡಗಳನ್ನು ಉಡುಗೊರೆಯಾಗಿ ನೀಡಲಾಯಿತು. 120 ರೈತರ ಮಾಹಿತಿ ಒಳಗೊಂಡ ‘ರೈತ ನುಡಿ’ ಪುಸ್ತಕ ಬಿಡುಗಡೆ ಮಾಡಲಾಯಿತು.
ಜಯಂತಿ ಜಯರಾಮ ಸೌರಚಾಲಿತ ರೇಡಿಯೋ ಉದ್ಘಾಟಿಸಿದರು. ರೈತರಿಗೆ ಬಿತ್ತನೆಗಾಗಿ ಅರಿಸಿನ, ಮಾಂಗಾಯಿ ಶುಂಠಿ, ಪಟಾವಳಿ ಹಬ್ಬು, ಡ್ರ್ಯಾಗನ್ ಫ್ರೂಟ್ಸ್, ಕೆಸ, ಕಸ್ತೂರಿ ಅರಿಸಿನ ವಿತರಿಸಲಾಯಿತು.
ಪುಣ್ಯಭೂಮಿ ಸಂಸ್ಥೆಯ ದೊಡ್ಡ ವೀರೇಗೌಡ, ರಂಗಶೆಟ್ಟಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.