ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3,871 ರೈತರಿಗೆ ಸಹಾಯಧನ ಸ್ಥಗಿತ

ಕಿಸಾನ್‌ ಸಮ್ಮಾನ್‌ ಯೋಜನೆಗೆ ಎರಡು ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ
Last Updated 6 ಡಿಸೆಂಬರ್ 2020, 16:47 IST
ಅಕ್ಷರ ಗಾತ್ರ

ಹಾಸನ: ಕೃಷಿ ಚಟುವಟಿಕೆಗೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಜಾರಿಗೊಳಿಸಿದ ಮಹತ್ವಾಕಾಂಕ್ಷೆಯ ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಸಹಾಯಧನ ಪಡೆಯಲು ಅರ್ಹತೆ ಇಲ್ಲದಿದ್ದರೂ ಅರ್ಜಿ ಸಲ್ಲಿಸಿದ್ದ ಜಿಲ್ಲೆಯ 3,871 ರೈತರನ್ನು ಯೋಜನೆಯಿಂದ ಅನರ್ಹಗೊಳಿಸಲಾಗಿದೆ.

ಜಿಲ್ಲೆಯ 2,70,023 ರೈತರು ಅರ್ಜಿ ಸಲ್ಲಿಸಿ, ಯೋಜನೆಗೆ ನೋಂದಣಿ ಮಾಡಿಕೊಂಡಿದ್ದರು. ವಾರ್ಷಿಕ ₹ 6 ಸಾವಿರಗಳನ್ನು ಮೂರು ಕಂತಗಳಲ್ಲಿ ರೈತರ ಖಾತೆಗೆ ನೇರ ಜಮೆ ಮಾಡಲಾಗುತ್ತಿತ್ತು. ಇದಕ್ಕಾಗಿ ಸರ್ಕಾರ ಕೆಲ ನಿಬಂಧನೆ ವಿಧಿಸಿತ್ತು. ಅರ್ಹತೆ ಇಲ್ಲದಿದ್ದರೂ ಸಾವಿರಾರು ರೈತರು ಅರ್ಜಿ ಸಲ್ಲಿಸಿದರು. ರಾಜ್ಯದ 85,206 ರೈತರನ್ನು ಯೋಜನೆಯಿಂದ ಅನರ್ಹಗೊಳಿಸಲಾಗಿದೆ.

ಅರ್ಜಿದಾರರ ದಾಖಲೆಗಳ ಪರಿಶೀಲಿಸಿರುವ ಕೇಂದ್ರ, ಅನರ್ಹ ರೈತರನ್ನು ಯೋಜನೆಯಿಂದ ಕೈ ಬಿಡಬೇಕು ಹಾಗೂ ಇಲ್ಲಿವರೆಗೆ ಸಹಾಯಧನ ಪಾವತಿಯಾಗಿದ್ದರೆ ಅದನ್ನು ವಾಪಸ್ ಪಡೆಯುವಂತೆ ಕೃಷಿ ಇಲಾಖೆಗೆ ಸೂಚಿಸಿದೆ. ಹಾಗಾಗಿ ಜಿಲ್ಲೆಯ 3,871 ರೈತರು ಅನರ್ಹಗೊಂಡಿದ್ದಾರೆ.

ಸಹಾಯಧನ ಪಡೆಯುವ ರೈತರು ಆದಾಯ ತೆರಿಗೆ ಪಾವತಿದಾರರಾಗಿರಬಾರದು. ₹ 10 ಸಾವಿರ ಮೇಲ್ಪಟ್ಟ ಪಿಂಚಣಿ ಪಡೆಯುತ್ತಿರಬಾರದು. ಈ ಷರತ್ತು ಪಾಲಿಸದೆ ರೈತರು ಅರ್ಜಿ ಸಲ್ಲಿಸಿ ಎರಡು ವರ್ಷದಿಂದ ಸೌಲಭ್ಯ ಪಡೆಯುತ್ತಿದ್ದಾರೆ. ಈಗ ಅವರೆಲ್ಲ ಹಣ ವಾಪಸ್ ಮಾಡಬೇಕಾಗಿದೆ. ನೋಟಿಸ್ ಕಳುಹಿಸಲು ಇಲಾಖೆ ನಿರ್ಧರಿಸಿದೆ.

ಷರತ್ತು ಮೀರಿ ನೋಂದಣಿ ಮಾಡಿಕೊಂಡಿದ್ದವರು ಹಣ ವಾಪಸ್ ಮಾಡಬೇಕು. ಇಲ್ಲವಾದರೆ ಕ್ರಮ ಜರುಗಿಸಬೇಕಾಗುತ್ತದೆ ಎಂಬ ಸರ್ಕಾರದ ಸೂಚನೆಗೆ ಹಲವು ಜಿಲ್ಲೆಗಳ ರೈತರು ಸಮಜಾಯಿಷಿ ನೀಡಿದ್ದಾರೆ. ಆದರೆ, ಜಿಲ್ಲೆಯ ರೈತರು ನೋಂದಣಿ ರದ್ದತಿಗೆ ಅರ್ಜಿ ಸಲ್ಲಿಸಿರಲಿಲ್ಲ.

‘ಸರ್ಕಾರದ ವಿಧಿಸಿರುವ ಷರತ್ತುಗಳ ಬಗ್ಗೆ ಅಧಿಕಾರಿಗಳು ಸ್ಪಷ್ಟವಾಗಿ ತಿಳಿಸಲಿಲ್ಲ. ನಿಯಮದ ಪ್ರಕಾರವೇ ಅರ್ಜಿ ಸಲ್ಲಿಸಿದ್ದೇವೆ. ರೈತರ ಖಾತೆಗಳಿಗೆ ಹಣ ಸಂದಾಯವಾಗಿದೆ. ಈಗ ಹಣ ವಾಪಸ್‌ ಮಾಡಬೇಕೆಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಇಲಾಖೆಯಿಂದ ಈವರೆಗೂ ನೋಟಿಸ್‌ ಬಂದಿಲ್ಲ. ರೈತ ನಾಯಕರ ಜತೆ ಚರ್ಚಿಸಲಾಗುವುದು’ ಎಂದು ರೈತರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT