ಹಾಸನ: ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಪ್ರಮುಖ ಜಲಾಶಯವಾಗಿರುವ ಜಿಲ್ಲೆಯ ಹೇಮಾವತಿಯ ಒಡಲು ಇದೀಗ ಬರಿದಾಗುವ ಹಂತ ತಲುಪಿದೆ. ಈ ಮಧ್ಯೆ ಇರುವ ನೀರನ್ನು ಎಡದಂಡೆ ಕಾಲುವೆಗೆ ಹರಿಸಲಾಗುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.
ಈ ಬಾರಿ ಮುಂಗಾರು ಮಳೆ ತೀರಾ ಕಡಿಮೆಯಾಗಿದ್ದು, ಹೇಮಾವತಿ ಜಲಾಶಯದಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಇದೆ. ಇದರಿಂದ ಜಲಾನಯನ ಪ್ರದೇಶದ ಜನರಿಗೆ ಈ ಬಾರಿ ಕೃಷಿಗೆ ಹೋಗಲಿ, ಕುಡಿಯು ವುದಕ್ಕಾಗದರೂ ನೀರು ಸಿಗಲಿದೆಯೇ ಎನ್ನುವ ಚಿಂತೆ ಕಾಡುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈಗ ಜಲಾಶಯದ ನೀರು ಬಹುತೇಕ ಖಾಲಿಯಾಗಿದೆ. ಕಳೆದ ವರ್ಷ ಇದೇ ವೇಳೆಗೆ ಜಲಾಶಯ ಭರ್ತಿಗೆ ಕೇವಲ 4 ಅಡಿ ಮಾತ್ರ ಬಾಕಿ ಇತ್ತು. 2922 ಅಡಿ ಗರಿಷ್ಠ ಮಟ್ಟವಿದ್ದು, ಮಂಗಳವಾರ 2889.72 ಅಡಿ ಇತ್ತು. ಇದೀಗ ಜಲಾಶಯದ ಮಟ್ಟದ 33 ಅಡಿ ಕುಸಿದಿದ್ದು, ಸಹಜವಾಗಿಯೇ ಜನರಲ್ಲಿ ಆತಂಕ ಮೂಡಿದೆ.
ನೀರು ಸಂಗ್ರಹ ಸಾಮರ್ಥ್ಯದಲ್ಲೂ ಗಣನೀಯವಾಗಿ ಕುಸಿತ ಕಾಣುತ್ತಿದೆ. ಸದ್ಯ ಅಣೆಕಟ್ಟೆಯಲ್ಲಿ ಕೇವಲ 13.893 ಟಿಎಂಸಿ ನೀರಿದೆ. ಇದರಲ್ಲಿ ಬಳಕೆ ಮಾಡಬಹುದಾದ ನೀರಿನ ಪ್ರಮಾಣ 9.521 ಟಿಎಂಸಿ ಮಾತ್ರ. ಆದರೆ, ಒಳಹರಿವಿನ ಪ್ರಮಾಣ ಕೇವಲ 389 ಕ್ಯುಸೆಕ್ ಇದೆ.
ಆದರೆ, ಒಳಹರಿವಿಗೆ ಹೋಲಿಸಿದರೆ, ಜೂನ್ 28 ರಿಂದ ಹೊರ ಹರಿವಿನ ಪ್ರಮಾಣ ಹೆಚ್ಚಾಗಿದೆ. ಹೇಮಾವತಿ ನದಿ ಹಾಗೂ ಎಡದಂಡೆ ಕಾಲುವೆಗೆ ನಿತ್ಯ 1 ಸಾವಿರ ಕ್ಯುಸೆಕ್ಗೂ ಅಧಿಕ ನೀರನ್ನು ಬಿಡಲಾಗುತ್ತಿದೆ.
ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ನೀರು ಸಂಗ್ರಹ ಗಣನೀಯವಾಗಿ ಕುಸಿದಿದ್ದರೂ, ಕುಡಿಯುವ ಕಾರಣಕ್ಕೆ ನೀರನ್ನು ಹೊರ ಬಿಡಲಾಗುತ್ತಿದೆ. ನದಿಗೆ 200 ರಿಂದ 300 ಕ್ಯುಸೆಕ್ ನೀರು ಹರಿಯುತ್ತಿದ್ದರೆ, ಎಡದಂಡೆ ನಾಲೆಯ ಮೂಲಕ 1ಸಾವಿರ ಕ್ಯೂಸೆಕ್ ನೀರನ್ನು ತುಮಕೂರು ಮೊದಲಾದ ಕಡೆಗಳಿಗೆ ಹರಿಸಲಾಗುತ್ತಿದೆ. ಒಟ್ಟಾರೆ ಹೊರ ಹರಿವು 1300 ರಿಂದ 1400 ಕ್ಯುಸೆಕ್ವರೆಗೆ ಇದೆ.
ಜಿಲ್ಲೆಯ ಕೆಲವೆಡೆ ಕುಡಿಯುವ ನೀರು, ಜಲಾಶಯದ ಕೆಳಭಾಗದಲ್ಲಿ ವಿದ್ಯುತ್ ಉತ್ಪಾದನಾ
ಘಟಕಗಳ ನಿರ್ವಹಣೆಗೆ ಅಗತ್ಯವಿರುವ ನೀರನ್ನು ಮಾತ್ರ ಜಲಾಶಯದಿಂದ ಬಿಡಲಾಗುತ್ತಿದೆ ಎಂದು ಜಲಾಶಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದರೂ, ಎಡದಂಡೆ ಕಾಲುವೆಯ ಮೂಲಕ ತುಮಕೂರು ಜಿಲ್ಲೆಗೆ ನೀರು ಹರಿಸಲಾಗುತ್ತಿದೆ. ನೀರು ಕೊಡುವುದಾದರೆ, ಎಲ್ಲರಿಗೂ ಕೊಡಲಿ. ಇಲ್ಲವೇ ನೀರನ್ನು ಸಂಗ್ರಹಿಸಿ ಇಡಲಿ. ಈ ರೀತಿ ಒಂದು ಕಡೆ ನೀರು ಹರಿಸಿ, ಇನ್ನೊಂದು ಕಡೆ ನೀರು ಸ್ಥಗಿತ ಮಾಡುವುದು ಸರಿಯಲ್ಲ ಎನ್ನುವ ಒತ್ತಾಯವೂ ಕೇಳಿ ಬರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.