ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ | ಪದಾಧಿಕಾರಿಗಳ ನೇಮಕ: ಬಿಜೆಪಿಯಲ್ಲಿ ಅಪಸ್ವರ

Published 20 ಫೆಬ್ರುವರಿ 2024, 4:42 IST
Last Updated 20 ಫೆಬ್ರುವರಿ 2024, 4:42 IST
ಅಕ್ಷರ ಗಾತ್ರ

ಹಾವೇರಿ: ಲೋಕಸಭೆ ಚುನಾವಣೆಗೆ ಬಿಜೆಪಿ ಪಕ್ಷದಲ್ಲಿ ಭರದ ಸಿದ್ಧತೆ ನಡೆಯುತ್ತಿರುವ ಹೊತ್ತಿನಲ್ಲೇ, ಹಾವೇರಿ ಜಿಲ್ಲಾ ಘಟಕದಲ್ಲಿ ಭಿನ್ನಾಭಿಪ್ರಾಯ ಮತ್ತು ಬಿರುಕು ಕಾಣಿಸಿಕೊಂಡಿದೆ. 

ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅರುಣಕುಮಾರ ಪೂಜಾರ್ ಅವರು ಈಚೆಗೆ ಅಧಿಕಾರ ಸ್ವೀಕರಿಸಿದರು. ನಂತರ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳಿಗೂ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಪದಾಧಿಕಾರಿಗಳ ಪಟ್ಟಿ ಬಗ್ಗೆ ಪಕ್ಷದಲ್ಲಿ ಅಪಸ್ವರ ಕೇಳಿ ಬಂದಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬೆಳಕಿಗೆ ಬಂದಿದೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಜಾತಿ ಮತ್ತು ಹಣದ ಆಧಾರದ ಮೇಲೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮಣೆ ಹಾಕಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.  

ಪಕ್ಷ ವಿರೋಧಿಗಳಿಗೆ ಮಣೆ:

‘2023ನೇ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯೊಬ್ಬರಿಗೆ ಬಿ ಫಾರ್ಮ್‌ ಅನ್ನು ಕೆಪಿಸಿಸಿ ಅಧ್ಯಕ್ಷರಿಂದ ಪಡೆದಿದ್ದ ನಂಜುಂಡೇಶ ಕಳ್ಳೇರ ಅವರು ಕಾಂಗ್ರೆಸ್‌ ಪರ ಕೆಲಸ ಮಾಡಿದ್ದಾರೆ. ಆದರೆ, ಈಗ ಹಾವೇರಿ ಜಿಲ್ಲೆಯ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಇವರನ್ನು ಯಾವ ಸಿದ್ಧಾಂತದ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ’ ಎಂದು ಬಿಜೆಪಿಯ ನಗರ ಘಟಕದ ಮಾಜಿ ಅಧ್ಯಕ್ಷ ನಿರಂಜನ ಹೇರೂರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಅವಧಿ ಮುಗಿದರೂ ಮುಂದುವರಿಕೆ:

‘ಹಾವೇರಿ ಗ್ರಾಮಾಂತರ ತಾಲ್ಲೂಕು ಅಧ್ಯಕ್ಷರಾಗಿ ಈಗ ನೇಮಕಗೊಂಡಿರುವ ವ್ಯಕ್ತಿ ಹಾವೇರಿಯಲ್ಲಿಯೇ ಉಳಿದುಕೊಂಡಿದ್ದಾರೆ, ಆದರೆ ನಗರದಲ್ಲಿಯೇ ಇದ್ದುಕೊಂಡು ಗ್ರಾಮೀಣ ಘಟಕವನ್ನು ಹೇಗೆ ಬಲಪಡಿಸುತ್ತಾರೆ. ಹಾವೇರಿ ನಗರ ಘಟಕದ ಅಧ್ಯಕ್ಷರ ಅವಧಿ ಮುಗಿದಿದ್ದರೂ, ಅವರನ್ನೇ ಮುಂದುವರಿಸಿರುವುದು ಏಕೆ?’ ಬೇರೆಯವರಿಗೆ ಅವಕಾಶ ಕಲ್ಪಿಸಬೇಕಿತ್ತು’ ಎಂದು ಬಿಜೆಪಿ ಮುಖಂಡರಾದ ಪ್ರವೀಣ್‌ ಶೆಟ್ಟರ್‌, ಸತೀಶ ಕ್ಯಾತಣ್ಣನವರ, ಜಗದೀಶ ಅಂಕಲಕೋಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

‘ಜಿಲ್ಲಾ ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಹಲವರು ಆಕಾಂಕ್ಷಿಗಳಿದ್ದರು. ಎಲ್ಲರ ಸಮಕ್ಷಮದಲ್ಲಿ ಸಭೆ ನಡೆಸಿ, ಒಮ್ಮತದಿಂದ ನೇಮಕ ಮಾಡಬೇಕಿತ್ತು. ಆದರೆ, ಏಕಾಏಕಿ ನಿರ್ಧಾರ ಕೈಗೊಂಡು ತಮಗೆ ಬೇಕಾದವರನ್ನು ನೇಮಕ ಮಾಡಿರುವುದನ್ನು ನಾವು ಖಂಡಿಸುತ್ತೇವೆ’ ಎಂದು ಬಿಜೆಪಿ ಮುಖಂಡರಾದ ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ ಮುಂತಾದವರು ತಿಳಿಸಿದರು. 

ಗೊಂದಲದ ಗೂಡಾದ ಸಭೆ

ಪದಾಧಿಕಾರಿಗಳ ನೇಮಕದ ಬಗ್ಗೆ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಸಭೆ ನಡೆಯಿತು. ಪರಸ್ಪರ ವಾಗ್ವಾದ ಆಕ್ಷೇಪ ಟೀಕೆಗಳು ಜೋರಾದ ಹಿನ್ನೆಲೆಯಲ್ಲಿ ಸಭೆ ಗೊಂದಲದ ಗೂಡಾಯಿತು.  ನಿಷ್ಠಾವಂತರನ್ನು ಕಡೆಗಣಿಸಿದ್ದು ಯಾಕೆ? ಪಕ್ಷ ವಿರೋಧಿಗಳಿಗೆ ಮಣೆ ಹಾಕಿದ್ದು ಏಕೆ? ಎಂದು ಹಲವು ಮುಖಂಡರು ಜಿಲ್ಲಾ ಘಟಕದ ಅಧ್ಯಕ್ಷರನ್ನು ಪ್ರಶ್ನಿಸಿದರು.  ‘ಗೊಂದಲ ಗುಂಪುಗಾರಿಕೆ ಮಾಡುವ ಅವಶ್ಯಕತೆ ನಮಗೆ ಇಲ್ಲ. ನಾನು ಕೂಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇನೆ. ಸೋಲಿಗೆ ನಾನು ಕಾರಣನೇ ಹೊರತು ನಮ್ಮ ಕಾರ್ಯಕರ್ತರಲ್ಲ. ₹40 ಕೋಟಿ ಖರ್ಚು ಮಾಡಿದ್ದೆ. ಪಕ್ಷ ಸಂಘಟಿಸಿ ಮೋದಿಯವರನ್ನು ಪ್ರಧಾನಿ ಮಾಡುವುದು ನಮ್ಮೆಲ್ಲರ ಗುರಿ’ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ್‌ ಹೇಳಿದರು. 

ಜಿಲ್ಲೆಯಲ್ಲಿ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ನನ್ನ ಪಾತ್ರವಿಲ್ಲ. ಪಕ್ಷದ ರಾಜ್ಯ ನಾಯಕರ ನಿರ್ದೇಶನದಂತೆ ನಡೆದುಕೊಂಡಿದ್ದೇನೆ. ಕೆಲ ಭಿನ್ನಾಭಿಪ್ರಾಯಗಳಿದ್ದು ಶೀಘ್ರವೇ ಬಗೆಹರಿಸಲಾಗುವುದು
ಅರುಣಕುಮಾರ ಪೂಜಾರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT