ಹಾವೇರಿ: ಪಿಂಚಣಿ ಸೌಲಭ್ಯ ಸಿಗದೆ, ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿರುವ ಜಿಲ್ಲೆಯ 8 ನಿವೃತ್ತ ಶಿಕ್ಷಕರೊಂದಿಗೆ ಬೆಂಗಳೂರಿನಲ್ಲಿ ಸೆ.28ರಂದು ಸಭೆ ನಡೆಸಿ, ಸಮಸ್ಯೆ ಇತ್ಯರ್ಥಪಡಿಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶಕುಮಾರ್ ಭರವಸೆ ನೀಡಿದ್ದಾರೆ.
ಸೆ.25ರಂದು ‘ಪ್ರಜಾವಾಣಿ’ ಮುಖಪುಟದಲ್ಲಿ ಪ್ರಕಟವಾಗಿದ್ದ ‘ದಯಾಮರಣ ಕೋರಿ ನಿವೃತ್ತ ಶಿಕ್ಷಕರಿಂದ ಮನವಿ’ ವರದಿಗೆ ಸ್ಪಂದಿಸಿದ ಸಚಿವರು, ಹಾವೇರಿಯ ಡಿಡಿಪಿಐ ಅಂದಾನಪ್ಪ ವಡಗೇರಿ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ನಿವೃತ್ತ ಶಿಕ್ಷಕರನ್ನು ಸಭೆಗೆ ಕರೆತರುವಂತೆ ಸೂಚನೆ ನೀಡಿದ್ದಾರೆ.
‘ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿರುವುದರಿಂದ ಸಮಸ್ಯೆಗೆ ಪರಿಹಾರ ಸಿಗುವ ಆಶಾಭಾವನೆ ಇದೆ. ನಾವೆಲ್ಲರೂ ಸಭೆಗೆ ಹಾಜರಾಗಲಿದ್ದೇವೆ’ ಎಂದು ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ಅಧ್ಯಕ್ಷ ಜಿ.ಹನುಮಂತಪ್ಪ ತಿಳಿಸಿದರು.