ಗುತ್ತಲ: ಪಟ್ಟಣದ ನೆಮ್ಮದಿ ಕೇಂದ್ರದಲ್ಲಿ ಆಧಾರ ತಿದ್ದುಪಡಿ ಸೇರಿದಂತೆ ಅರ್ಜಿ ನಮೂನೆಗಳಿಗೆ ಸರ್ಕಾರ ನಿಗದಿಪಡಿಸಿದ ಹಣಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪ ತಶೀಲ್ದಾರರ್ಗೆ ಮನವಿ ಸಲ್ಲಿಸಿದರು.
ಆಧಾರ ತಿದ್ದುಪಡಿಗೆ ಸರ್ಕಾರ ₹25ರಿಂದ ₹30 ನಿಗದಿಪಡಿಸಿದೆ. ಆದರೆ ನೆಮ್ಮದಿ ಕೇಂದ್ರಗಳಲ್ಲಿ ₹150ರಿಂದ ₹200 ವಸೂಲಿ ಮಾಡಲಾಗುತ್ತಿದೆ. ಇಂತಹ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಉಪತಹಶೀಲ್ದಾರ್ ಎಂ.ಡಿ.ಕಿಚಡೇರ ಮಾತನಾಡಿ, ಹಣ ವಸೂಲಿ ಮಾಡುತ್ತಿರುವುದು ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಅಂತಹ ಘಟನೆಗಳು ನಡೆದಿದ್ದರೂ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಾವೇರಿ ತಾಲ್ಲೂಕು ಘಟಕದ ಅಧ್ಯಕ್ಷ ಹಾಲೇಶ ಹಾಲಣ್ಣನವರ, ಚನ್ನಪ್ಪ ಹೊನ್ನಮ್ಮನವರ, ದಾದಾಪೀರ ಕಾಲೆಕಾನವರ, ಗೌಸ್ಪಾಕ್ ಬಾಲೆಬಾಯಿ, ಬಸಣ್ಣ ಅರಳಿ, ವೀರೇಶ ಕಮ್ಮಾರ, ಮಲ್ಲಿಕಾರ್ಜುನ ಪಾಟೀಲ, ಕುಮಾರ ರಾಮಾಪೂರಮಠ ಇದ್ದರು.