ತಡಸ (ಹಾವೇರಿ): ಶಿಗ್ಗಾವಿ ತಾಲ್ಲೂಕಿನ ಶ್ಯಾಡಂಬಿ ಗ್ರಾಮದ ಪ್ರಗತಿಪರ ರೈತ ವರುಣಗೌಡ ಪಾಟೀಲ ಅವರು ತಮ್ಮ ತೋಟದಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ಸ್ವಂತ ಹಣದಲ್ಲಿ ವಿಮಾನದ ಮೂಲಕ ಪ್ರವಾಸ ಭಾಗ್ಯ ಕಲ್ಪಿಸಿದ್ದಾರೆ.
ದೀಪಾವಳಿಯಂದು ವಿಶೇಷ ಉಡುಗೊರೆ ಕೊಡುವ ತೋಟದ ಮಾಲೀಕರಾದ ವರುಣಗೌಡ ಮತ್ತು ಕಿರಣಗೌಡ ಅವರು, ಈ ಬಾರಿ ತೋಟದ ಏಳು ಕೃಷಿ ಕಾರ್ಮಿಕರಿಗೆ ಸುಮಾರು ₹3 ಲಕ್ಷ ಖರ್ಚು ಮಾಡಿ ಅವರಿಗೆ ಬಟ್ಟೆ ಊಟದ ವ್ಯವಸ್ಥೆ ಕಲ್ಪಿಸಿ, ಬೆಂಗಳೂರಿನಿಂದ ಭಾನುವಾರ ವಿಮಾನದಲ್ಲಿ ದೆಹಲಿ ಮೂಲಕ ಆಗ್ರಾ, ಜೈಪುರ, ಮಥುರಾ ಸೇರಿದಂತೆ ಸುತ್ತಮುತ್ತಲಿನ ಪ್ರವಾಸಿ ಸ್ಥಳಗಳಿಗೆ ಕರೆದೊಯ್ದಿದ್ದಾರೆ.
‘ನಮ್ಮ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮನೆಯ ಸದಸ್ಯರಂತೆ ಕಾಣುತ್ತೇವೆ. ಅವರ ಕಷ್ಟ– ಸುಖಗಳಲ್ಲಿ ಭಾಗಿಯಾಗುತ್ತೇವೆ. ನಮ್ಮ ತಂದೆ ದಿವಂಗತ ಎಂ.ಸಿ.ಪಾಟೀಲ ಅವರ ಕಾಲದಿಂದಲೂ ಈ ಕಾರ್ಮಿಕರು ನಮ್ಮಲ್ಲಿ ಕೆಲಸ ಮಾಡುತ್ತಿದ್ದಾರೆ. ಕಾರ್ಮಿಕರ ಆಸೆಯಂತೆ ವಿಮಾನಯಾನದ ಮೂಲಕ ಪ್ರವಾಸ ಮಾಡಿಸುತ್ತಿದ್ದೇವೆ’ ಎಂದು ವರುಣಗೌಡ ಪಾಟೀಲ ಹೇಳಿದರು.