ಹಾವೇರಿ:ಏಪ್ರಿಲ್ ತಿಂಗಳಲ್ಲಿ ಭಾರಿ ಗಾಳಿ–ಮಳೆಗೆ ಜಿಲ್ಲಾ ಕ್ರೀಡಾಂಗಣದ ಪೆವಿಲಿಯನ್ ಕಟ್ಟಡದ ಚಾವಣಿಗೆ ಅಳವಡಿಸಿದ್ದ ಸಿಮೆಂಟ್ ಶೀಟುಗಳು ಹಾರಿ ಹೋಗಿದ್ದವು.
ಇದರಿಂದ ಪೆವಿಲಿಯನ್ ಕಟ್ಟಡ ಕೆಳಗೆ ಕುಳಿತುಕೊಳ್ಳುತ್ತಿದ್ದ ಕ್ರೀಡಾಪಟು ಮತ್ತು ಸಾರ್ವಜನಿಕರಿಗೆ ಮಳೆ ಬಂದಾಗ ನೀರು ಸೋರುತ್ತಿತ್ತು. ಜತೆಗೆ ಬಿಸಿಲಿನ ಝಳ ಕೂಡ ಹೆಚ್ಚಾಗಿತ್ತು. ಚಾವಣಿ ಹಾಳಾಗಿ ಕ್ರೀಡಾಂಗಣಕ್ಕೆ ಅವಲಕ್ಷಣವಾಗಿತ್ತು.
ಈ ಬಗ್ಗೆ ‘ಪ್ರಜಾವಾಣಿ’ಯ‘ಕ್ರೀಡಾ ವ್ಯಥೆ’ ಸರಣಿಯಲ್ಲಿ ‘ಸಮಸ್ಯೆಗಳಿಂದ ತೆವಳುತ್ತಿರುವ ಕ್ರೀಡಾ ಇಲಾಖೆ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ವರದಿಯಲ್ಲಿ ಕ್ರೀಡಾಂಗಣದ ಅವ್ಯವಸ್ಥೆ ಮತ್ತು ಸಮಸ್ಯೆಗಳ ಬಗ್ಗೆ ಸವಿಸ್ತಾರವಾಗಿ ಬೆಳಕು ಚೆಲ್ಲಲಾಗಿತ್ತು.
ವರದಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಅವರು, ಚಾವಣಿಯ ಹಳೆಯ ಸಿಮೆಂಟು ಶೀಟುಗಳನ್ನು ಪೂರ್ಣ ತೆರವುಗೊಳಿಸಿ, ₹3 ಲಕ್ಷ ವೆಚ್ಚದಲ್ಲಿ ಹೊಸ ಜೆಎಸ್ಡಬ್ಲ್ಯು ಶೀಟುಗಳನ್ನು ಹಾಕಿಸಿದ್ದಾರೆ.
ಪ್ರಜಾವಾಣಿ ವರದಿ ಫಲಶ್ರುತಿಗೆ ಹಾವೇರಿ ನಗರದ ಕ್ರೀಡಾಪಟುಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.