ಪ್ರೀತಿ, ಅಂತಃಕರಣದ ಭಾವವೇ ಸೇವೆ. ಹಣ, ಅಂತಸ್ತು, ಸಂಪತ್ತು, ಎಲ್ಲಕ್ಕೂ ಮಿಗಿಲಾದುದು ಇನ್ನೊಬ್ಬರ ಕಷ್ಟಗಳಿಗೆ ಸ್ಪಂದಿಸಿ ಸೇವೆ ಮಾಡುವುದು. ರೋಗಿಗಳಿಗೆ ನೀಡುವ ಸೇವೆಯೇ ಪರಮಾತ್ಮನ ಸೇವೆ ಎಂದು ನಂಬಿ ನನ್ನ ನರ್ಸಿಂಗ್ ಸೇವೆಯನ್ನು 12 ವರ್ಷದಿಂದ ನಿಷ್ಠೆಯಿಂದ ನೆರವೇರಿಸುತ್ತಿದ್ದೇನೆ.
ಕುಡುಪಲಿ ಗ್ರಾಮದಲ್ಲಿ ಐದು ವರ್ಷ ಸೇವೆ ಸಲ್ಲಿಸಿ, ಈಗ ರಟ್ಟೀಹಳ್ಳಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಏಳು ವರ್ಷಗಳಿಂದ ನರ್ಸಿಂಗ್ ಸೇವೆ ಮಾಡುತ್ತಿದ್ದೇನೆ. ಸಾಕಷ್ಟು ಹೆರಿಗೆಗಳನ್ನು ವೈದ್ಯರ ಸಲಹೆ ಮೇರೆಗೆ ಯಶಸ್ವಿಯಾಗಿ ನಿರ್ವಹಿಸಿದ್ದೇನೆ. ಆಸ್ಪತ್ರೆಗೆ ಬರುವ ರೋಗಿಗಳನ್ನು ನಾವು ಅಕ್ಕರೆ, ಪ್ರೀತಿ ವಿಶ್ವಾಸ ನೀಡಿ, ಅವರಲ್ಲಿ ಧೈರ್ಯ ತುಂಬಿದರೆ ಬೇಗ ಗುಣಮುಖರಾಗುತ್ತಾರೆ ಎನ್ನುವುದು ನನ್ನ ನಂಬಿಕೆ.
ರಟ್ಟೀಹಳ್ಳಿ ತಾಲ್ಲೂಕು ಕೇಂದ್ರವಾಗಿದ್ದರಿಂದ 8 ಜನ ಸ್ಟಾಫ್ ನರ್ಸ ಅವಶ್ಯವಿತ್ತು. ಆದರೆ ಕೇವಲ ಇಬ್ಬರು ನರ್ಸ್ಗಳು ಮಾತ್ರ ಇಲ್ಲಿ ಕೆಲಸದಲ್ಲಿದ್ದರು. ಇದರಿಂದ ಕೆಲಸದ ಒತ್ತಡವೂ ಹೆಚ್ಚಾಗಿತ್ತು. ನನ್ನ ಏಳು ತಿಂಗಳ ಮಗುವನ್ನು ನೋಡಿಕೊಳ್ಳಲು ನನಗೆ ಸಾಧ್ಯವಾಗುತ್ತಿರಲಿಲ್ಲ. ಈ ಸಂದರ್ಭದಲ್ಲಿ ನನ್ನ ಮಗುವನ್ನು ಬಿಟ್ಟು ರೋಗಿಗಳನ್ನು ಆರೈಕೆ ಮಾಡುವುದು ಕಷ್ಟವಾಗುತ್ತಿತ್ತು.
ನನ್ನ ಪತಿಗೆ ಕೊರೊನಾ ಸೋಂಕು ತಗುಲಿ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದ ವೇಳೆಯಲ್ಲಂತೂ ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ಆಗ ನನ್ನ ಆಸ್ಪತ್ರೆಯ ಹಿರಿಯ ವೈದ್ಯರು, ಸಿಬ್ಬಂದಿ ನನಗೆ ಧೈರ್ಯತುಂಬಿ, ನನ್ನ ಕರ್ತವ್ಯಕ್ಕೆ ಸಾಕಷ್ಟು ಸಹಕಾರಿಯಾದರು. ಹಗಲು–ರಾತ್ರಿ ಎನ್ನದೇ ನಿರಂತರ ಸೇವೆ ಸಲ್ಲಿಸಿದ್ದೇನೆ. ಕೊರೊನಾ ಸೋಂಕಿತರನ್ನು ಮುಟ್ಟಿ ಆರೈಕೆ ಮಾಡಲು ಸಾಧ್ಯವಾಗುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.
- ಪ್ರೇಮಾ ಲೆಕ್ಕಪ್ಪಳವರ ಶುಶ್ರೂಷಕಿ, ಸಮುದಾಯ ಆರೋಗ್ಯ ಕೇಂದ್ರ, ರಟ್ಟೀಹಳ್ಳಿ