ಹಾವೇರಿ: ಹಾನಗಲ್ ಸಮೀಪದ ನಾಲ್ಕರ ಕ್ರಾಸ್ ಬಳಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. 3 ದಿನದೊಳಗಾಗಿ ವರದಿ ನೀಡುವಂತೆ ಕರ್ನಾಟಕ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚನೆ ನೀಡಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು, ‘ಇದು ಅತ್ಯಂತ ಅಮಾನವೀಯ ಮತ್ತು ಆಘಾತಕಾರಿ ಘಟನೆಯಾಗಿದೆ. ಸಮಾಜ ದೊಡ್ಡ ಮಟ್ಟದಲ್ಲಿ ಇದರ ಜವಾಬ್ದಾರಿ ಹೊರಬೇಕಿದೆ. ಯಾವಾಗ ಬೇಕಾದರೂ ಮಹಿಳೆಯ ಮೇಲೆ ದಾಳಿ ನಡೆಯಬಹುದು ಎಂಬ ಭಯ ಮಹಿಳೆಯರನ್ನು ಕಾಡುತ್ತಿದೆ. ಸಮಾಜದಲ್ಲಿ ನೈತಿಕತೆ ಕುಸಿದಿದೆ. ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳಬೇಕು ಎಂಬುದನ್ನು ನಾವು ನಮ್ಮ ಗಂಡು ಮಕ್ಕಳಿಗೆ ಕಲಿಸುತ್ತಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಮೂರು ದಿನಗಳಲ್ಲಿ ವರದಿಯನ್ನು ಕಳುಹಿಸದಿದ್ದರೆ ಮಹಿಳಾ ಆಯೋಗದ ತಂಡವೇ ಕರ್ನಾಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ ಎಂದು ಹೇಳಿದ್ದಾರೆ.