ಸಾಗರ: ಮೂರು ವರ್ಷಗಳಿಗೊಮ್ಮೆ ನಡೆಯುವ ಕರ್ನಾಟಕದ ಅತಿ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರೆ ಫೆ.18ರಿಂದ 9 ದಿನಗಳ ಕಾಲ ನಡೆಯಲಿದ್ದು, ನಗರದ ಪ್ರಮುಖ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದ್ದಾರೆ.
ಇಲ್ಲಿನ ನಗರಸಭೆ ಕಚೇರಿ ಹಿಂಭಾಗದ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲೋಕೋಪಯೋಗಿ ಇಲಾಖೆ ಕಚೇರಿ ಇರುವ ರಸ್ತೆಯನ್ನು ₹ 20 ಲಕ್ಷ ವಿನಿಯೋಗಿಸಿ ಅಭಿವೃದ್ಧಿಗೊಳಿಸಲಾಗಿದೆ. ರಸ್ತೆಯ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗುವುದು’ ಎಂದರು.
ಕಳೆದ ಮಳೆಗಾಲದಲ್ಲಿ ನಗರ ವ್ಯಾಪ್ತಿಯಲ್ಲಿ ಹಾಳಾಗಿರುವ ರಸ್ತೆಗಳ ದುರಸ್ತಿಗೆ ಮುಖ್ಯಮಂತ್ರಿ ₹ 6.80 ಕೋಟಿ ವಿಶೇಷ ಅನುದಾನ ನೀಡಿದ್ದಾರೆ. ಇದರ ನೆರವಿನಿಂದ 41 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಬಹುತೇಕವು ಮುಕ್ತಾಯದ ಹಂತದಲ್ಲಿವೆ ಎಂದು ತಿಳಿಸಿದರು.
ಗಣಪತಿ ಕೆರೆ ಮೇಲ್ಭಾಗದ ಬಿ.ಎಚ್. ರಸ್ತೆ ಪಕ್ಕದಲ್ಲಿ ₹ 50 ಲಕ್ಷ ವೆಚ್ಚದಲ್ಲಿ 150 ಅಡಿ ಎತ್ತರದ ಬೃಹತ್ ಧ್ವಜಸ್ತಂಭ ನಿರ್ಮಿಸಲಾಗುತ್ತಿದೆ. ವರ್ಷದ 365 ದಿನವೂ ಇಲ್ಲಿ ರಾಷ್ಟ್ರಧ್ವಜ ಹಾರುವ ವ್ಯವಸ್ಥೆ ಮಾಡಲಾಗುವುದು. ಇದರ ಸುತ್ತಲೂ ಉದ್ಯಾನ, ಮಕ್ಕಳ ಆಟಿಕೆ ಸೌಲಭ್ಯಕ್ಕೆ ₹ 40 ಲಕ್ಷ ವಿನಿಯೋಗಿಸಲಾಗುವುದು ಎಂದರು.