ಕಲಬುರ್ಗಿ: ‘ಒಬ್ಬ ಮನುಷ್ಯ ರಕ್ತ ನೀಡುವುದರಿಂದ ಮೂರು ಜನರಿಗೆ ಉಪಯೋಗವಾಗುತ್ತದೆ. ಹಾಗಾಗಿ, ಉಳಿದೆಲ್ಲ ದಾನಗಳಿಗಿಂತ ರಕ್ತದಾನ ಅತ್ಯಂತ ಪ್ರಯೋಜನಕಾರಿ’ ಎಂದುಗುಲಬರ್ಗಾ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಪ್ರೊ.ಸೊನಾರ ನಂದಪ್ಪ ಡಿ. ಹೇಳಿದರು.
ನಗರದ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದಲ್ಲಿ ಮಹಾದೇವಪ್ಪ ರಾಂಪೂರೆ ಅವರ 48ನೇ ಪುಣ್ಯತಿಥಿ ಅಂಗವಾಗಿ ಹಮ್ಮಿಕೊಂಡ ರಕ್ತದಾನ ಶಿಬಿರದ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯನಿಗೆ ಬೇಕಾಗುವ ಹೃದಯ, ಕಿಡ್ನಿಯಂತಹ ಅಂಗಾಂಗಗಳು ಕೃತಕವಾಗಿ ನಿರ್ಮಾಣ ಮಾಡುವಲ್ಲಿ ವಿಜ್ಞಾನಿಗಳು ಸಫಲತೆ ಪಡೆದುಕೊಂಡಿದ್ದಾರೆ. ಆದರೆ, ರಕ್ತ ಮಾತ್ರ ಮನುಷ್ಯ ಮನುಷ್ಯನಿಂದಲೇ ಪಡೆಯಬೇಕು ಎಂದರು.
ಮಹಾದೇವಪ್ಪ ರಾಂಪೂರೆ ಅವರ ಜೀವನದ ಕುರಿತು ನಿವೃತ್ತ ಪ್ರಾಧ್ಯಾಪಕರಾದ ಡಾ.ಎಸ್.ಆರ್. ತಡಕಲ ಅವರು ಸವಿಸ್ತಾರವಾಗಿ ತಿಳಿಸಿದರು. ರಕ್ತದಾನದ ಮಹತ್ವದ ಕುರಿತು ಮತ್ತು ಅದರಿಂದ ಆಗುವ ಲಾಭಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಶಾಖೆ ಕಲಬುರಗಿಯ ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ಮನವರಿಕೆ ಮಾಡಿಕೊಟ್ಟರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಎ. ಪಾಟೀಲಅಧ್ಯಕ್ಷತೆ ವಹಿಸಿದ್ದರು. ವೈಷ್ಣವಿ ಪ್ರಾರ್ಥನಾ ಗೀತೆ ಹಾಡಿದರು. ಪ್ರೊ.ಜಗದೇವಿ ಹಿರೇಮಠ ಸ್ವಾಗತಿಸಿದರು. ಪ್ರೇಮಚಂದ ಚವ್ಹಾಣ ನಿರೂಪಿಸಿದರು. ಪ್ರಾಣೇಶ ಎಸ್. ವಂದಿಸಿದರು.
ಹಿರಿಯ ಪ್ರಾಧ್ಯಾಪಕರಾದ ಎ.ಜಿ. ಪೊಲೀಸ್ ಪಾಟೀಲ, ದೇವಿದಾಸ ಚೆಟ್ಟಿ, ಮಹೇಶ ಗಂವ್ಹಾರ, ಪ್ರತಿಭಾ ಸಂಗಾಪೂರೆ, ಸುನಿತಾ ಚಿನ್ಮಳ್ಳಿ, ಶಂಕ್ರಪ್ಪ ಕಲಬುರಗಿ ಇದ್ದರು.