ಕಲಬುರ್ಗಿ: ಕಳೆದ ಒಂದೂವರೆ ವರ್ಷದಿಂದ ಖಾಲಿ ಇರುವ ಗುಲಬರ್ಗಾ ವಿ.ವಿ. ಕುಲಪತಿ ನೇಮಕದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ ತರುವೆ ಎಂದು ಉಪಮುಖ್ಯಮಂತ್ರಿ, ಲೋಕೋಪಯೋಗಿ, ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.
ತ್ರೈಮಾಸಿಕ ಸಭೆ ನಡೆಸಲು ಇಲ್ಲಿನ ವಿ.ವಿ. ಆವರಣಕ್ಕೆ ಬಂದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
2020ರಲ್ಲಿ ಕೊರೊನಾ, ಅತಿವೃಷ್ಟಿಯು ಜಿಲ್ಲೆಯನ್ನು ಹೈರಾಣುಗೊಳಿಸಿತು. ಆದಾಗ್ಯೂ ಜಿಲ್ಲಾಡಳಿತ ಸಾಕಷ್ಟು ಶ್ರಮವಹಿಸಿ ಪರಿಹಾರ ಕಾರ್ಯಗಳನ್ನು ಕೈಗೊಂಡಿತು. ಜನರನ್ನು ಸ್ಥಳಾಂತರಗೊಳಿಸುವಲ್ಲಿ ಹಾಗೂ ಪರಿಹಾರ ಕೇಂದ್ರಗಳನ್ನು ತೆರೆದು ಉತ್ತಮ ಕೆಲಸ ಮಾಡಿದೆ ಎಂದರು.
ಸರ್ಕಾರಿ ಕಚೇರಿಗಳಿಗೆ ಸಿಬ್ಬಂದಿ ತಡವಾಗಿ ಬಂದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.