ಕಲಬುರಗಿ: ವಾರಾಂತ್ಯ ಕರ್ಫ್ಯೂ ಹೇರಿದ ಕಾರಣ ಶನಿವಾರ ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಜನ ಹಾಗೂ ವಾಹನ ಸಂಚಾರ ತುಂಬ ವಿರಳವಾಗಿದೆ.
ಇಲ್ಲಿನ ಜನನಿಬಿಡ ಪ್ರದೇಶಗಳಾದ ಬಸ್ ನಿಲ್ದಾಣ, ರೈಲು ನಿಲ್ದಾಣ, ಎಪಿಎಂಸಿ, ಎಂ.ಎಸ್.ಕೆ ಮಿಲ್ ಪ್ರದೇಶ, ಶರಣಬಸವೇಶ್ವರ ದೇವಸ್ಥಾನ, ಖಾಜಾ ಬಂದಾ ನವಾಜ್ ದರ್ಗಾ ಸೇರಿದಂತೆ ಬಹುಪಾಲು ಕಡೆ ಪ್ರವೇಶ ನಿರ್ಬಂಧಿಸಲಾಗಿದೆ.
ರಾಮಮಂದಿರ ಸರ್ಕಲ್, ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತ, ಜಗತ್ ಸರ್ಕಲ್, ರಾಷ್ಟ್ರಪತಿ ಚೌಕ, ಮುಸ್ಲಿಂ ಚೌಕ, ಖರ್ಗೆ ಸರ್ಕಲ್, ಲಾಳಗೇರಿ ಕ್ರಾಸ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕೂಡ ವಾಹನಗಳ ಓಡಾಟ ಕಡಿಮೆ ಇದೆ.
ಸೂಪರ್ ಮಾರ್ಕೆಟ್ ನಲ್ಲಿ ಕೆಲವು ವ್ಯಾಪಾರಿಗಳು ಎಂದಿನಂತೆಯೇ ಶನಿವಾರ ನಸುಕಿನಲ್ಲಿ ಕೂಡ ತಮ್ಮ ಹಣ್ಣು, ತರಕಾರಿ ವ್ಯಾಪಾರ ಆರಂಭಿಸಿದರು. ಇದರಿಂದ ಬೆಳಿಗ್ಗೆ 9ರವರೆಗೆ ಗ್ರಾಹಕರ ಸಂಖ್ಯೆ ಹೆಚ್ಚಾಗಿತ್ತು. 10ರ ನಂತರ ಸ್ಥಳಕ್ಕೆ ಬಂದ ಸಂಚಾರ ಪೊಲೀಸರು ಜನರನ್ನು ಚದುರಿಸಿದರು.
ನಗರ ಹಾಗೂ ಗ್ರಾಮೀಣ ಸಾರಿಗೆಯ ಎಲ್ಲ ಬಸ್ಸುಗಳು ನಿಲ್ದಾಣದಲ್ಲೇ ಠಿಕಾಣೆ ಹೂಡಿದವು. ಕೆಲವರು ಬೈಕ್, ಆಟೊ, ಕಾರುಗಳಲ್ಲಿ ಸಂಚರಿಸಿದರು. ವೃತ್ತಗಳಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆದರೆ ವಾಹನ ತಡೆದು ತಪಾಸಣೆ ಮಾಡಲಿಲ್ಲ.