ಕಲಬುರಗಿ: ಇಲ್ಲಿನ ವೆಂಕಟೇಶ ನಗರದ ಎರಡು ಮನೆಗಳ ಕೀಲಿ ಮುರಿದು ಕಳ್ಳತನ ಮಾಡಿರುವ ಕಳ್ಳರು 5 ತೊಲೆ ಬಂಗಾರ ಹಾಗೂ ₹ 20 ಸಾವಿರ ನಗದು ಸೇರಿದಂತೆ ₹ 2.55 ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ.
ಬೆಳಗಿನ ಜಾವ ಮೂರು ಗಂಟೆಗೆ ಮೊದಲ ಮಹಡಿಯಲ್ಲಿ ಬಾಡಿಗೆ ಇದ್ದ ವಿಜಯಕುಮಾರ್ ದೇವಣಗಾಂವ ಅವರಿಗೆ ಸೇರಿದ ಮನೆಯ ಕೀಲಿ ಮುರಿದು ಲಾಕರ್ ನಲ್ಲಿ ಇಟ್ಟಿದ್ದ ಚಿನ್ನಾಭರಣ ಕಳ್ಳತನ ಮಾಡಿದ್ದಾರೆ. ಈ ಮನೆ ಮಾಲೀಕರು ಬಳ್ಳಾರಿಯಲ್ಲಿದ್ದು, ವಿಜಯಕುಮಾರ್ ಅವರು ಕಳೆದ 10 ವರ್ಷಗಳಿಂದ ಇದೇ ಮನೆಯಲ್ಲಿ ನೆಲೆಸಿದ್ದಾರೆ.
ಕೆಳಭಾಗದ ಮನೆಯಲ್ಲಿ ಬಟ್ಟೆ ವ್ಯಾಪಾರಿಯೊಬ್ಬರು ಬಟ್ಟೆಗಳನ್ನು ಸಂಗ್ರಹಿಸಿದ್ದರು. ಬಟ್ಟೆ ಇದ್ದ ಮನೆಯ ಷಟರ್ ನ ಮೂರು ಕೀಲಿ ಮುರಿದು ಒಳನುಗ್ಗಿದ್ದಾರೆ. ಆದರೆ, ಹಣ ಸಿಕ್ಕಿಲ್ಲ. ಎರಡು ಜೊತೆ ಬಟ್ಟೆ ಕದ್ದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಎರಡೂ ಮನೆಗಳನ್ನು ಪರಿಶೀಲಿಸಿದರು.
'ಮನೆಗೆ ಕೀಲಿ ಹಾಕಿಕೊಂಡು ಊರಿಗೆ ಹೋಗಿದ್ದೆವು. ಮರಳಿ ಬರುವಷ್ಟರಲ್ಲಿ ಕಳ್ಳತನವಾಗಿದೆ' ಎಂದು ವಿಜಯಕುಮಾರ್ ದೇವಣಗಾಂವ 'ಪ್ರಜಾವಾಣಿ'ಗೆ ತಿಳಿಸಿದರು.