ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ಏಪ್ರಿಲ್ 20ರಿಂದ ಜೂನ್ 8ರವರೆಗೆ ಬಿಪಿಒ ಸಹಾಯವಾಣಿ ಸೇವೆ ನೀಡಿದ್ದೆವು. ಏಪ್ರಿಲ್ ತಿಂಗಳಲ್ಲಿ ಕರೆ ಮಾಡಿದ್ದ ಅಂದಿನ ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ ವಣಿಕ್ಯಾಳ ಅವರು ತರಬೇತಿ ಪಡೆದು ಕೆಲಸ ಶುರು ಮಾಡುವಂತೆ ಸೂಚಿಸಿದ್ದರು. ಈ ಕೆಲಸ ಮಾಡಲು ಕಾರ್ಯಾದೇಶ ಕೇಳಿದಾಗ ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಕೋವಿಡ್ ಕೆಲಸಗಳನ್ನು ಮೌಖಿಕವಾಗಿ ತಿಳಿಸಿ ಮಾಡಿಸಿಕೊಳ್ಳುತ್ತಿದ್ದೇವೆ. ಹಾಗಾಗಿ, ಬಿಲ್ ಕೊಟ್ಟ ಬಳಿಕ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಈ ಕೆಲಸ ಮಾಡುವಂತೆ ಕೆಕೆಆರ್ಡಿಬಿ ಅಧ್ಯಕ್ಷರೂ ಮೌಖಿಕ ಸೂಚನೆ ನೀಡಿದ್ದರು. ಹಿಂದಿನ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಕಾರ್ಯಕ್ರಮ ಉದ್ಘಾಟನೆಗೆ ಬಂದಿದ್ದರು. ಜಿಲ್ಲಾಧಿಕಾರಿ ಕೆಕೆಆರ್ಡಿಬಿಗೆ ನಮ್ಮ ಬಿಲ್ ಮೊತ್ತ ಪಾವತಿಸಲು ಕೋರಿ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೆಕೆಆರ್ಡಿಬಿ ಅಧಿಕಾರಿಗಳು ಈ ಬಗ್ಗೆ ಮಂಡಳಿಯಿಂದ ಯಾವುದೇ ಆದೇಶ ನೀಡದ್ದರಿಂದ ಜಿಲ್ಲಾಡಳಿತವೇ ಬಿಲ್ ಪಾವತಿಸಬೇಕು ಎಂದು ಹಿಂಬರಹ ನೀಡಿದ್ದರು’ ಎಂದರು.