ಕಲಬುರಗಿ: ‘ತಾಂತ್ರಿಕ ಅಭಿವೃದ್ಧಿ ಮತ್ತು ತಂತ್ರಾಂಶದಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸಮನಾಗಿದೆ’ ಎಂದು ಮಹಾರಾಷ್ಟ್ರ ಯಶವಂತರಾವ್ ಚೌವಾಣ ಮುಕ್ತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಪ್ರೊ.ಇ.ಎ. ವಯುನಂದನ ಹೇಳಿದರು.
ಆಳಂದ ತಾಲ್ಲೂಕಿನ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ‘ಡಿಜಿಟಲ್ ಇಂಡಿಯಾದ ಅನುಷ್ಠಾನದ ಪರಿಣಾಮದ ಮೌಲ್ಯಮಾಪನ’ ಕುರಿತು ಹಮ್ಮಿಕೊಂಡ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ತಂತ್ರಜ್ಞಾನವನ್ನು ನಮ್ಮ ಅನುಕೂಲಕ್ಕಾಗಿ ಬಳಸಬೇಕೆ ವಿನಃ ಅದಕ್ಕಾಗಿ ನಾವಾಗಬಾರದು. ಆಡಳಿತವನ್ನು ಮನೆ ಬಾಗಿಲಿಗೆ ತರಲು ಇ-ಆಡಳಿತವನ್ನು ಪ್ರಾರಂಭಿಸಲಾಯಿತು. ಆದ್ದರಿಂದ ತಳಮಟ್ಟದಿಂದ ಸಂಸತ್ತಿನವರೆಗೆ ಸರ್ಕಾರವು ಇ-ಆಡಳಿತವನ್ನು ಜಾರಿಗೆ ತಂದಿದೆ. ಇದರಿಂದ ಜನರ ಜೀವನದಲ್ಲಿ ಪರಿವರ್ತನೆಯಾಗಿರುವುದನ್ನು ನೋಡಬಹುದಾಗಿದೆ’ ಎಂದು ಹೇಳಿದರು.
ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯು ಆಡಳಿತದಲ್ಲಿ ದಕ್ಷತೆ, ಸಮಯದ ಉಳಿತಾಯ, ಭ್ರಷ್ಟಾಚಾರ ಮತ್ತು ಸಂಘರ್ಷ ಮುಕ್ತತೆ, ಕಾರ್ಯಾಚರಣೆಯ ವೆಚ್ಚದ ಕಡಿತ, ಪಾರದರ್ಶಕತೆ ಮತ್ತು ವರ್ಧಿತ ಹೆಚ್ಚಿನ ಹೊಣೆಗಾರಿಕೆಯಂತಹ ಅನೇಕ ಪ್ರಯೋಜನಗಳಾಗಿವೆ’ ಎಂದರು.
ಗುಲಬರ್ಗಾ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಬಿ.ವಿ.ದಾಂಡ್ರಾ, ಪ್ರೊ. ವೈ.ಪಾರ್ಥಸಾರಥಿ, ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ. ಚನ್ನವೀರ ಆರ್.ಎಂ. ಮಾತನಾಡಿದರು.
ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ, ‘ಸಂಶೋಧನೆಗಳು ಪದೊನ್ನತಿಗಾಗಿ ಇರಬಾರದು, ಬದಲಾಗಿ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಬೇಕು. ವಿಶ್ವವಿದ್ಯಾಲಯದ ಎಲ್ಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮುಂದೆ ಬಂದು ತಮ್ಮ ಸುತ್ತಲಿನ ಸಮಸ್ಯೆಗಳ ಬಗ್ಗೆ ಕೆಲಸ ಮಾಡಬೇಕು’ ಎಂದರು.
‘ನಮ್ಮ ವಿಶ್ವವಿದ್ಯಾಲಯವು ಪಿಎಂ ಉಜ್ವಲ್, ಸ್ಕಿಲ್ ಇಂಡಿಯಾ, ಪಿಎಂ ಕಿಸಾನ್ ಸಮ್ಮಾನ್ ಮತ್ತು ಡಿಜಿಟಲ್ ಇಂಡಿಯಾ ಯೋಜನೆಗಳ ಮೌಲ್ಯಮಾಪನದಲ್ಲಿ ಕೆಲಸ ಮಾಡಿದೆ. ಈ ಅಧ್ಯಯನಗಳ ಸಂಶೋಧನೆಗಳು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಸಹಾಯ ಮಾಡಲಿವೆ’ ಎಂದು ಹೇಳಿದರು.
ಯೋಜನಾ ನಿರ್ದೇಶಕ ಡಾ. ಸಂದೀಪ್ ಇನಾಮಪುಡಿ ಸ್ವಾಗತಿಸಿದರು. ಗುರುರಾಜ್ ಮುಕರಂಬಿ, ದಿನೇಶ ಗೆಹ್ಲೋಟ್, ಸುಪ್ರಿಯಾ ಡೇವಿಡ್, ಮಲ್ಲಿಕಾರ್ಜುನ್ ಹೂಗಾರ್, ಅಲೋಕ್ ಗೌರವ್, ಕಿರಣ್ ಗಜನೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.