ಕಲಬುರ್ಗಿ: ವಾರದಿಂದ ಬಿಡುವು ನೀಡಿದ್ದ ಮಳೆ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿಯಿತು. ಬಿರುಸಿನಿಂದ ಕೂಡಿದ ಮಳೆ ಹನಿಗಳಿಂದಾಗಿ ಕೆಲವೇ ಹೊತ್ತಿನಲ್ಲಿ ರಸ್ತೆ, ಚರಂಡಿಯಲ್ಲಿ ನೀರು ಹರಿಯಲಾರಂಭಿಸಿತು.
ನಗರದ ಸಾರಿಗೆ ಸದನ, ಹಳೇ ಜೇವರ್ಗಿ ಅಂಡರ್ಪಾಸ್, ಕುಸನೂರ ರಸ್ತೆ, ತಾರಫೈಲ್, ಜನತಾ ಕಾಲೊನಿಯ ಹಲವೆಡೆ ನೀರಿನಿಂದಾವೃತವಾಗಿತ್ತು. ಬಿಸಿಲಿನ ತಾಪ ಕಡಿಮೆಯಾಗಿದ್ದರೂ ಧಗೆ ಹೆಚ್ಚಾಗಿತ್ತು. ಕಲಬುರ್ಗಿ ಹೊರವಲಯದ ಗ್ರಾಮಗಳಲ್ಲಿಯೂ ರಾತ್ರಿ ಉತ್ತಮ ಮಳೆ ಸುರಿದಿದೆ.
ಇದೇ 4ರಿಂದ ಆರಂಭವಾದ ಮಳೆ ಸೆ 11ರವರೆಗೂ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದು, ಈ ಸಂಬಂಧ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್ಗಳು, ಕಂದಾಯ ಇಲಾಖೆಯ ಇತರ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಪ್ರವಾಹ ಉಂಟಾದರೆ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಕಾಳಜಿ ಕೇಂದ್ರ ಆರಂಭಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಸೂಚನೆ ನೀಡಿದ್ದಾರೆ.