ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಾರ ಪ್ರಮಾಣದ ಗಾಂಜಾ ವಶ: ಪ್ರಿಯಾಂಕ್ ಖರ್ಗೆ ಕಳವಳ

Last Updated 11 ಸೆಪ್ಟೆಂಬರ್ 2020, 1:58 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ಜಿಲ್ಲೆ ಕಾಳಗಿಯಲ್ಲಿ ಬೆಂಗಳೂರು ಪೊಲೀಸರು ದಾಳಿ ಮಾಡಿ ಅಂದಾಜು ₹ 6 ಕೋಟಿ ಮೌಲ್ಯದ 1350 ಕೆ.ಜಿ. ಗಾಂಜಾ ವಶಪಡಿಸಿಕೊಂಡಿರುವುದನ್ನು ನೋಡಿದರೆ ಜಿಲ್ಲೆ ಅಕ್ರಮ ಚಟುವಟಿಕೆಗಳ ತಾಣವಾದಂತಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

‘ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ಪ್ರಮಾಣದ ಅಕ್ರಮ ಚಟುವಟಿಕೆ ಇದಾಗಿದ್ದು ಬಯಲಿಗೆಳೆದ ಬೆಂಗಳೂರು ಪೊಲೀಸರು ಅಭಿನಂದನಾರ್ಹರು’ ಎಂದು ಹೇಳಿದ್ದಾರೆ.

ತಾವು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಎಲ್ಲ ರೀತಿಯ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿದ್ದಾಗಿ ಹೇಳಿರುವ ಶಾಸಕ ಪ್ರಿಯಾಂಕ್, 2019ರ ನಂತರ ಅಕ್ರಮ ಜೂಜು ಅಡ್ಡೆಗಳು ಜಿಲ್ಲೆಯಾದ್ಯಂತ ತಲೆ ಎತ್ತಿದ್ದು ಜಿಲ್ಲೆಯನ್ನು ಅಕ್ರಮ ಚಟುವಟಿಕೆಗಳ ತಾಣವನ್ನಾಗಿ ಪರಿವರ್ತಿಸಿವೆ ಎಂದು ದೂರಿದ್ದಾರೆ.

ಒಡಿಶಾ ರಾಜ್ಯದಿಂದ ಸರಬರಾಜು ಮಾಡಲಾಗಿದೆ ಎನ್ನಲಾದ ಈ ಅಪಾರ ಪ್ರಮಾಣದ ಗಾಂಜಾ ಮೂರು ರಾಜ್ಯಗಳ ಚೆಕ್ ಪೋಸ್ಟ್ ದಾಟಿಕೊಂಡು ಬಂದಿದ್ದಾದರೂ ಹೇಗೆ? ಇಷ್ಟೊಂದು ಸುಲಭವಾಗಿ ಸರಬರಾಜಾಗಲು ರಾಜಕೀಯ ಕೈವಾಡ ಇರುವುದು ಸ್ಪಷ್ಟವಾಗಿದೆ. ಈ ಕುರಿತು ಸ್ಥಳೀಯ ಆಡಳಿತಕ್ಕೆ ಮಾಹಿತಿ ಇರಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಪೊಲೀಸರು ದಾಳಿಯನ್ನು ಉಲ್ಲೇಖಿಸಿರುವ ಅವರು ದಾಳಿಯ ಕುರಿತು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದಿರುವುದು ನೋಡಿದರೆ, ಸ್ಥಳೀಯ ಪೊಲೀಸರ ಮೇಲೆ ಆಡಳಿತ ಪಕ್ಷದ ರಾಜಕೀಯ ಒತ್ತಡ ಇತ್ತೇ ಎನ್ನುವ ಅನುಮಾನ ಮೂಡುತ್ತದೆ. ಅಥವಾ ಸ್ಥಳೀಯ ಪೊಲೀಸರ ಮೇಲೆ ನಂಬಿಕೆ ಇರಲಿಲ್ಲವೇ ಎನ್ನುವ ಪ್ರಶ್ನೆ ಮೂಡುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT