ಸೇಡಂ (ಕಲಬುರ್ಗಿ): ತಾಲ್ಲೂಕಿನ ಕಾಗಿಣಾ ನದಿ ನೀರಿನ ಪ್ರವಾಹ ಮುಂದುವರಿದಿದ್ದು ಲಾಹೋಡ್, ಯಡ್ಡಳ್ಳಿ, ತೆಲ್ಕೂರ, ಸಟಪಟನಹಳ್ಳಿ, ಬಿಬ್ಬಳ್ಳಿ, ಮೀನಹಾಬಾಳ, ಬೀರನಳ್ಳಿ, ಸಂಗಾವಿ, ಮಳಖೇಡ ಗ್ರಾಮಗಳಲ್ಲಿನ ಮನೆಗಳಿಗೆ ನೀರು ನುಗ್ಗಿದೆ.
ಮಳೆಯ ಮ ಪ್ರಮಾಣ ಕಡಿಮೆಯಿದ್ದರೂ ಬೆಣ್ಣೆತೊರಾ, ಚಂದ್ರಂಪಳ್ಳಿಯ ನೀರು ನದಿಗೆ ಬಿಟ್ಟಿದ್ದರಿಂದ ನದಿ ಪ್ರವಾಹ ಹೆಚ್ಚಾಗಿದೆ.
ಮಳಖೇಡ ಸೇತುವೆ ಮೇಲೆ ಸುಮಾರು 10-12 ಅಡಿ ಎತ್ತರದಲ್ಲಿ ನೀರು ತನ್ನ ಆರ್ಭಟ ಮುಂದುವರೆಸುತ್ತಿದೆ. ಇದರಿಂದಾಗಿ ಮಳಖೇಡನ ಕೋಲಿವಾಡ ಬಡಾವಣೆಯ ಮನೆಗಳು ನೀರು ನುಗ್ಗಿದೆ. ಸಟಪಟನಹಳ್ಳಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಮಳಖೇಡ ದರ್ಗಾದ ಪ್ರದೇಶದಲ್ಲಿ ನೀರಿನ ಪ್ರವಾಹ ಹೆಚ್ಚಿದ್ದರಿಂದ ಜನರಿಗೆ ಸುರಕ್ಷತೆ ಇಲ್ಲದಂತಾಗಿದೆ.
ಮಳಖೇಡ ರಾಜಶ್ರೀ ಸಿಮೆಂಟ್ ಕಾರ್ಖಾನೆಯ ವತಿಯಿಂದ ಮಳಖೇಡ ದರ್ಗಾ ಕಾಲೊನಿ ನಿವಾಸಿಗಳಿಗೆ ಜಮಖಾನೆ, ಊಟದ ವ್ಯವಸ್ಥೆ, ಮಾಸ್ಕ್ ವಿತರಿಸಲಾಯಿತು.
ಎರಡನೇ ದಿನವೂ ಮಳಖೇಡ ಸೇತುವೆ ಬಂದ್: ಜಿಲ್ಲೆಯಿಂದ ತಾಲ್ಲೂಕಿಗೆ ಸಂಪರ್ಕಿಸುವ ಮಳಖೇಡ ಸೇತುವೆ ಹಾಗೂ ಚಿತ್ತಾಪುರ ಸಂಪರ್ಕಿಸುವ ಮಾರ್ಗ ಕಡಿತಗೊಂಡಿದೆ. ಇದರಿಂದಾಗಿ ಜಿಲ್ಲೆಯಿಂದ ತಾಲ್ಲೂಕಿನ ಸಂಪರ್ಕ ಕಡಿತಗೊಂಡಿದೆ.
37 ಜನರ ರಕ್ಷಣೆ: ತಾಲ್ಲೂಕಿನ ಮಳಖೇಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಿಲುಕಿದ್ದ 7 ಜನರನ್ನು ಹಾಗೂ ತೆಲ್ಕೂರ ಗ್ರಾಮದ ಹೊರಗಡೆ ಸಿಲುಕಿದ್ದ 30 ಮೀನುಗಾರರನ್ನು ರಾತ್ರಿ ಎನ್ ಡಿ ಆರ್ ಎಫ್ ತಂಡ ರಕ್ಷಿಸಿದೆ. ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಇದ್ದರು.