ಕಲಬುರ್ಗಿ: ಮುಂಗಾರು ಹಂಗಾಮು ಆರಂಭವಾಗಿದ್ದು ರೈತರಿಗೆ ಆದ್ಯತೆಯ ಮೇರೆಗೆ ಸಾಲ ಮಂಜೂರು ಮಾಡಬೇಕು ಹಾಗೂ 2012–13ನೇ ಸಾಲಿನಲ್ಲಿ ಮಂಜೂರಾದ ₹ 11.80 ಕೋಟಿ ಹಣವನ್ನು ರೈತರ ಖಾತೆಗೆ ಪಾವತಿ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಇಲ್ಲಿನ ಕಲಬುರ್ಗಿ–ಯಾದಗಿರಿ ಕೇಂದ್ರಸಹಕಾರ ಬ್ಯಾಂಕ್ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ಬೆಳೆ ವಿಮೆ ಹಣವನ್ನುಪಾವತಿ ಮಾಡದೇ ದುರ್ಬಳಕೆ ಮಾಡಿಕೊಂಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಬೆಳೆವಿಮೆಯಿಂದ ವಂಚಿತರಾದವರು ಹಾಗೂ ಸಾಲ ಮನ್ನಾ ಆಗದ ರೈತರಿಗೂ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸೊಸೈಟಿಗಳ ಮೂಲಕ ಸಾಲ ವಿತರಿಸಬೇಕು. 2017–18ನೇ ಸಾಲಿನ ಹಿಂದಿನ ಸರ್ಕಾರಗಳ ಅವಧಿಯಲ್ಲಿ ಮಾಡಲಾದ ಸಾಲಮನ್ನಾದಿಂದ ವಂಚಿತರಾದ ರೈತರಿಗೆ ಆದ ಅನ್ಯಾಯವನ್ನು ಸರಿಪಡಿಸಬೇಕು. ಆ ರೈತರಿಗೆ ಹೊಸ ಸಾಲ ಕೊಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಮುಖಂಡರಾದ ಸುಧಾಮ ಧನ್ನಿ, ಪಾಂಡುರಂಗ ಮಾವಿನಕರ, ಮೇಘರಾಜ ಕಠಾರೆ, ಶಾಂತಪ್ಪ ಪಾಟೀಲ, ಸಿದ್ದರಾಮ ಹರವಾಳ, ಸುಭಾಷ್ ಜೇವರ್ಗಿ, ಮಲ್ಲನಗೌಡ, ಸಾಯಿಬಣ್ಣ ಗುಡಬಾ, ಪರಮೇಶ್ವರ ಕಾಂತಾ ಇದ್ದರು.