ಚಿಂಚೋಳಿ (ಕಲಬುರಗಿ ಜಿಲ್ಲೆ): ತಾಲ್ಲೂಕಿನ ಕುಂಚಾವರಂ ಸುತ್ತಲಿನ ಗ್ರಾಮಗಳಲ್ಲಿ ಸೋಮವಾರ ಬೆಳಿಗ್ಗೆ ಭೂಕಂಪದ ಅನುಭವವಾಗಿದೆ. ಬೆಳಿಗ್ಗೆ 6.31ಕ್ಕೆ ಭೂಮಿ ನಡುಗಿದ ಅನುಭವ ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಭೂಮಿ ನಡುಗಿದ ಅನುಭವವಾಯಿತು. ಇದರಿಂದ ಗಿಡಮರಗಳಲ್ಲಿ ಕುಳಿತಿದ್ದ ಪಕ್ಷಿಗಳು ಗಾಬರಿಯಿಂದ ಹಾರಿದವು. ಟೇಬಲ್ ಮೇಲೆ ಇರಿಸಿದ ಚಹಾ ಗ್ಲಾಸ್ ಅಲ್ಲಾಡಿತು ಎಂದು ಕುಂಚಾವರಂನ ಸಾಮಾಜಿಕ ಕಾರ್ಯಕರ್ತ ಟಿ. ಬಿಚ್ಚಪ್ಪ ತಿಳಿಸಿದರು.
ಕುಂಚಾವರಂ, ಪೋಚಾವರಂ, ಶಿವರಾಂಪುರ, ಮೊಗದಂಪುರ, ಲಕ್ಷ್ಮಾಸಾಗರ, ಲಿಂಗಾನಗರ, ಶಿವರೆಡ್ಡಿಪಳ್ಳಿಗಳಲ್ಲಿ ಭೂಕಂಪನ ಅನುಭವ ಜನರಿಗಾಗಿದೆ. ರಿಕ್ಟರ್ ಮಾಪಕದಲ್ಲಿ 2.5 ಕಂಪನಾಂಕ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೋಮವಾರ ಬೆಳಿಗ್ಗೆ ಸಂಭವಿಸಿದ ಭೂಕಂಪನದ ಕೇಂದ್ರ ಬಿಂದು ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮನಿಯಾರಪಳ್ಳಿಯಿಂದ ಈಶಾನ್ಯ ದಿಕ್ಕಿನಲ್ಲಿ 1.1 ಕಿ.ಮೀ ಇತ್ತು ಎಂದು ಮೂಲಗಳು ತಿಳಿಸಿವೆ.
ಮನಿಯಾರಪಳ್ಳಿ ಗ್ರಾಮವು ಕರ್ನಾಟದ ಗಡಿಯಿಂದ 1 ಕಿ.ಮೀ. ಅಂತರದಲ್ಲಿದೆ. ಶಹಾಪುರ ಶಿವರಾಂಪುರ ರಾಜ್ಯ ಹೆದ್ದಾರಿ -149 ಕೊನೆಯಾಗುವ ಶಿವರಾಂಪುರದಿಂದ ಕೂಗಳತೆ ಅಂತರದಲ್ಲಿದೆ.