ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ | ಮರಾಠಿ ಸಾಹಿತ್ಯ ಮಂಡಳಕ್ಕೆ ಹೊಸ ರೂಪ

ಎಸ್‌ವಿಪಿ ವೃತ್ತದಲ್ಲಿರುವ ಮಂಡಳ: ವಜ್ರ ಮಹೋತ್ಸವ ಸಂಭ್ರಮಾಚರಣೆಗೆ ಕೊರೊನಾ ಕರಾಳ ಛಾಯೆ
Last Updated 7 ಆಗಸ್ಟ್ 2020, 3:10 IST
ಅಕ್ಷರ ಗಾತ್ರ

ಕಲಬುರ್ಗಿ: ಕೊರೊನಾ ಸೋಂಕು ವ್ಯಾಪಿಸಿರದಿದ್ದರೆ ಮತ್ತು ಲಾಕ್‌ಡೌನ್‌ ಜಾರಿ ಆಗಿರದಿದ್ದರೆ, ಈ ವೇಳೆಗೆ ನಗರದ ಎಸ್‌ವಿಪಿ ವೃತ್ತದಲ್ಲಿರುವ ಮರಾಠಿ ಸಾಹಿತ್ಯ ಮಂಡಳದ ನವೀಕೃತ ಕಟ್ಟಡ ಉದ್ಘಾಟನೆಗೊಳ್ಳಬೇಕಿತ್ತು. ಹೊಸ ಸೌಲಭ್ಯ ಒಳಗೊಂಡ ಮಂಡಳದ ಗ್ರಂಥಾಲಯವು ಓದುಗರಿಗೆ ಲಭ್ಯವಾಗಬೇಕಿತ್ತು.

75ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಮರಾಠಿ ಸಾಹಿತ್ಯ ಮಂಡಳವು ಬೃಹತ್ ಸಮಾರಂಭ ಆಯೋಜಿಸಲು ಸಕಲ ಸಿದ್ಧತೆ ನಡೆಸಿತ್ತು. ಇದಕ್ಕೆ ಪೂರಕವಾಗಿ ಹಲವು ಸುತ್ತಿನ ಸಭೆ ಮತ್ತು ಸಿದ್ಧತಾ ಪ್ರಕ್ರಿಯೆಗಳು ನಡೆದಿದ್ದವು. ಆದರೆ, ಮಾರ್ಚ್ ತಿಂಗಳಲ್ಲಿ ಘೋಷಣೆಯಾದ ಲಾಕ್‌ಡೌನ್‌ ಎಲ್ಲಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತು.

ಮಂಡಳದ ಈಗಿರುವ ಕಟ್ಟಡ 1975ರಲ್ಲಿ ನಿರ್ಮಾಣಗೊಂಡಿದ್ದು, ಅಂದಿನ ಉಪರಾಷ್ಟ್ರಪತಿ ಬಿ.ಡಿ.ಜತ್ತಿಯವರು ಉದ್ಘಾಟಿಸಿದ್ದರು. ಕಟ್ಟಡವು ಹಳತಾಗಿರುವ ಮತ್ತು ಹೆಚ್ಚು ಸ್ಥಳಾವಕಾಶ ಬೇಕಿದ್ದ ಕಾರಣ ಕಟ್ಟಡದ ನವೀಕರಣ ಪ್ರಕ್ರಿಯೆಗೆ ಮಂಡಳದ ಪ್ರಮುಖರು ಮತ್ತು ಸದಸ್ಯರು ಈ ವರ್ಷ ಜನವರಿಯಲ್ಲಿ ಚಾಲನೆ ನೀಡಿದ್ದರು.

ಗ್ರಂಥಾಲಯಕ್ಕೆ ವಿಶಾಲ ಪ್ರಾಂಗಣ, ಸಾಂಸ್ಕೃತಿಕ–ವೈಚಾರಿಕ ಕಾರ್ಯಕ್ರಮಗಳಿಗೆ ಪ್ರತ್ಯೇಕ ಸಭಾಂಗಣ, ಮಂಡಳದ ಕಚೇರಿ ಎಲ್ಲವನ್ನೂ ನವೀಕೃತ ಕಟ್ಟಡ ಒಳಗೊಂಡಿದೆ. ಪುಸ್ತಕ, ಪತ್ರಿಕೆಗಳನ್ನು ಓದಲು ಅನುಕೂಲವಾಗಲೆಂದೇ ಹೊಸ ಕುರ್ಚಿ ಮತ್ತು ಮೇಜಿನ ವ್ಯವಸ್ಥೆ ಮಾಡಲಾಗಿದೆ.

1945ರ‌ಲ್ಲೇ ಅಸ್ತಿತ್ವಕ್ಕೆ ಮರಾಠಿ ಸಾಹಿತ್ಯ ಮಂಡಳವು ಮೊದಲು ಸಾಹಿತ್ಯಿಕ ಚಟುವಟಿಕೆ ಕಾರ್ಯಕ್ರಮಗಳಿಗೆ ಸೀಮಿತವಾಗಿತ್ತು. ಪುಟ್ಟ ಕೋಣೆಯಲ್ಲೇ ಸಾಹಿತ್ಯ ಕಾರ್ಯಕ್ರಮ ನಡೆಯುತ್ತಿದ್ದವು. ಕ್ರಮೇಣ ಮರಾಠಿ ಮತ್ತು ಕನ್ನಡ ಸಾಹಿತ್ಯಾಸಕ್ತರ ಸಂಖ್ಯೆಯೂ ಹೆಚ್ಚಾಗಿ ಚಟುವಟಿಕೆಗಳು ವೇಗ ಪಡೆಯಿತು.

‘ಸಾಹಿತ್ಯ ಮಂಡಳದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದಲು ಎಲ್ಲರಿಗೂ ಅವಕಾಶವಿದೆ. 10 ಸಾವಿರಕ್ಕೂ ಹೆಚ್ಚು ಮರಾಠಿ ಪುಸ್ತಕಗಳು ಲಭ್ಯ ಇವೆ. ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿ ಪತ್ರಿಕೆಗಳನ್ನು ತರಿಸುತ್ತೇವೆ. ಆಸಕ್ತರು ಮಂಡಳದ ಸದಸ್ಯತ್ವ ಪಡೆಯಬಹುದು’ ಎಂದು ಮಂಡಳದ ಖಜಾಂಚಿ ವಿದ್ಯಾಧರ ಮುರುಗಕರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಸೋಂಕು ವ್ಯಾಪಿಸುವುದು ಕಡಿಮೆಯಾದಲ್ಲಿ ಅಕ್ಟೋಬರ್‌ ತಿಂಗಳಲ್ಲಿ ಗ್ರಂಥಾಲಯ ಪುನರಾರಂಭಿಸುವ ಉದ್ದೇಶವಿದೆ. ಕಟ್ಟಡವನ್ನು ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಜನವರಿಯಲ್ಲಿ ಉದ್ಘಾಟಿಸುವ ಗುರಿಯಿದೆ. ನಿರ್ಮಾಣ ಪ್ರಕ್ರಿಯೆ ವೇಗದಿಂದ ಕೈಗೊಳ್ಳಲಾಗಿದೆ’ ಎಂದು ಅವರು ವಿವರಿಸಿದರು.

‘ಭಾವ ಅನುಬಂಧ’ ತ್ರೈಮಾಸಿಕ: ಮರಾಠಿ ಸಾಹಿತ್ಯ ಮಂಡಳದ ವತಿಯಿಂದ ‘ಭಾವ ಅನುಬಂಧ’ ಎಂಬ ತ್ರೈಮಾಸಿಕ ಪತ್ರಿಕೆಯನ್ನು ಹೊರತರಲಾಗುತ್ತಿದೆ. ಮರಾಠಿ ಸಾಹಿತ್ಯದಲ್ಲಿನ ವಿಶೇಷಗಳು, ಯುವ ಬರಹಗಾರರ ಲೇಖನಗಳು ಮತ್ತು ಸಾಹಿತ್ಯ ಕಾರ್ಯಕ್ರಮದ ಸುದ್ದಿಗಳು ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT