ಕಲಬುರ್ಗಿ: ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸಂಯುಕ್ತ ಕಿಸಾನ್ ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳುಶುಕ್ರವಾರ ಕರೆ ನೀಡಿದ ʼಭಾರತ ಬಂದ್ʼ ಜಿಲ್ಲೆಯಲ್ಲಿ ವಿಫಲವಾಯಿತು.
ಬೆಳಿಗ್ಗೆ ಎಂದಿನಂತೆಯೇ ಜನಜೀವನ ಮುಂದುವರೆಯಿತು. ಸರ್ಕಾರಿ ಬಸ್, ಆಟೋ, ಕಾರ್, ಬೈಕ್ ಸೇರಿದಂತೆ ಎಲ್ಲ ವಾಹನಗಳೂ ಓಡಾಡಿದವು. ಬೆಳಿಗ್ಗೆಯೇ ಎಲ್ಲ ವ್ಯಾಪಾರಿಗಳು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆದು ವಹಿವಾಟು ನಡೆಸಿದರು.
ಇಲ್ಲಿನ ಸೂಪರ್ ಮಾರ್ಕೆಟ್, ಕಣ್ಣಿ ಮಾರ್ಕೆಟ್, ಬಸ್ ನಿಲ್ದಾಣ, ಎಪಿಎಂಸಿಗಳಲ್ಲಿ ಕೂಡ ಜನಸಂದಣಿ ಯಥಾ ಪ್ರಕಾರ ಇತ್ತು.
ಪ್ರಮುಖ ವೃತ್ತಗಳು, ಚೌಕಗಳು, ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.
ಬಂದ್ ನಡೆಸಲು ಪೊಲೀಸ್ ಇಲಾಖೆ ಅನುಮತಿ ನೀಡದ ಕಾರಣ, ಹೋರಾಟಗಾರರು ಪ್ರತಿಭಟನೆ ಮಾತ್ರ ನಡೆಸಿದರು.