ವಾಡಿ: ಕಲಬುರಗಿ–ಯಾದಗಿರಿ ರಾಷ್ಟ್ರೀಯ ಹೆದ್ದಾರಿ–150ರ ಲಾಡ್ಲಾಪುರ ಸಮೀಪ ವಾಡಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಕರಿಯಪ್ಪ ಮಿರಗಿ (33) ಎಂಬುವರ ಶವ ಪತ್ತೆಯಾಗಿದೆ. ಅವರ ಮುಖಕ್ಕೆ ಮಾತ್ರ ಪೆಟ್ಟಾಗಿದ್ದು, ಇದು ಅಪಘಾತ ಅಥವಾ ಕೊಲೆಯೇ ಎಂಬುದರ ಬಗ್ಗೆ ಅನುಮಾನ ಮೂಡಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತೆಗ್ಗಳ್ಳಿ ನಿವಾಸಿ ಕರಿಯಪ್ಪ 8 ತಿಂಗಳ ಹಿಂದೆ ವಾಡಿ ಠಾಣೆಗೆ ವರ್ಗವಾಗಿದ್ದರು. ವಿಜಯಪುರ ಜಿಲ್ಲೆಗೆ ವರ್ಗಾವಣೆ ಬಯಸಿ ಈಚೆಗೆ ಇಲಾಖೆಗೆ ಪತ್ರ ಬರೆದಿದ್ದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.
‘ನಾಲವಾರ ಚೆಕ್ ಪೋಸ್ಟ್ ಕರ್ತವ್ಯ ಮುಗಿಸಿಕೊಂಡು ಭಾನುವಾರ ರಾತ್ರಿ 8ಕ್ಕೆ ಮನೆಗೆ ಬಂದ ಕರಿಯಪ್ಪ ಕುಟುಂಬದ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಊಟದ ಬಳಿಕ ಹೊರಗೆ ಹೋಗಿ ಬರುವುದಾಗಿ ಪತ್ನಿ ಹೇಳಿದವರು ಪುನಃ ವಾಪಸ್ ಬರಲಿಲ್ಲ. ಅವರ ಶವ ಪತ್ತೆಯಾಗಿದೆ. ಎಲ್ಲಾ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ಶಹಾಬಾದ್ ಡಿವೈಎಸ್ಪಿ ಶೀಲವಂತ ಹೊಸಮನಿ, ವಾಡಿ ಪಿಎಸ್ಐ ಸುದರ್ಶನ ರೆಡ್ಡಿ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.