ಕಲಬುರ್ಗಿ: ಪೊಲೀಸ್ ಕಾನ್ಸ್ಟೆಬಲ್ವೊಬ್ಬರು, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ವೃದ್ಧೆಯ ಪ್ರಾಣ ರಕ್ಷಣೆ ಮಾಡಿರುವ ಘಟನೆ ಜೇವರ್ಗಿ ತಾಲ್ಲೂಕಿನ ಕಟ್ಟಿಸಂಗಾವಿಯ ಸೇತುವೆ ಬಳಿ ಇತ್ತೀಚೆಗೆ ನಡೆದಿದ್ದು, ಅದರ ವಿಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೇವರ್ಗಿ ಠಾಣೆಯ ಕಾನ್ಸ್ಟೆಬಲ್ ಅನಿಲಕುಮಾರ್ ಎಂಬುವವರು ಸಮಯಪ್ರಜ್ಞೆ ಮೆರೆದು ಜಾಣ್ಮೆಯಿಂದ ಅಜ್ಜಿಯ ಮನವೊಲಿಸಿ ಆಕೆಯ ಪ್ರಾಣ ರಕ್ಷಣೆ ಮಾಡಿದ್ದಾರೆ. ಆಳಂದ ನಿವಾಸಿ ಗುರುಬಾಯಿ ಮಾಲಗಾರ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು ಎನ್ನಲಾಗಿದೆ.
ಗುರುವಾರ ಹೊಸ ವರ್ಷ ದಿನದ ರಾತ್ರಿ ಗುರುಬಾಯಿ ಹೊಟ್ಟೆ ನೋವಿನ ಕಾರಣಕ್ಕೆ ಭೀಮಾನದಿಗೆ ಕಟ್ಟಿಸಂಗಾವಿ ಬಳಿ ನಿರ್ಮಿಸಿರುವ ಸೇತುವೆ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ, ಅದೇ ರಸ್ತೆಯಲ್ಲಿ ರಾತ್ರಿ ಗಸ್ತಿಗೆ ತೆರಳುತ್ತಿದ್ದ ಅನಿಲಕುಮಾರ್ ಗಮನಿಸಿದ್ದಾರೆ.
ತಕ್ಷಣ ಸಮಯ ಪ್ರಜ್ಞೆ ತೋರಿದ ಅನಿಲಕುಮಾರ್, ಅಜ್ಜಿಯನ್ನು ಮಾತಿಗೆಳೆದು ಜಾಣ್ಮೆಯಿಂದ ಆಕೆಯ ಬಳಿ ಹೋಗಿದ್ದಾರೆ. ತಮ್ಮ ಸಹೋದ್ಯೋಗಿ ವಿಜಯ ಕುಮಾರ್ ಹಾಗೂ ಸ್ಥಳೀಯರ ಸಹಾಯದಿಂದ ಅಜ್ಜಿಯನ್ನು ರಕ್ಷಣೆ ಮಾಡಿದ್ದಾರೆ. ನಂತರ ಪೆಟ್ರೋಲಿಂಗ್ ವಾಹನದ ಮೂಲಕ ವೃದ್ಧೆಯನ್ನು ಜೇವರ್ಗಿಗೆ ಕರೆದೊಯ್ದಿದ್ದಾರೆ.