ಕಲಬುರ್ಗಿ: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮದಲ್ಲಿ ಚುನಾವಣೆ ವೈಷಮ್ಯಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಜೈಲಿಗೆ ಹಾಕುವ ಮೂಲಕ ಆ ಮಹಿಳೆಯ ಜೊತೆಯಿದ್ದ ಮೂರು ವರ್ಷದ ಮಗುವಿನ ಸಾವಿಗೆ ಕಾರಣರಾದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಗುವಿನ ಸಂಬಂಧಿಗಳು ಇಲ್ಲಿನ ಜಿಮ್ಸ್ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಭಾಗವಹಿಸಿದ್ದು, ಪರಿಸ್ಥಿತಿ ಬಿಗುವಿನಿಂದ ಕೂಡಿದೆ.
ಘಟನೆ ವಿವರ: ಜೇವರ್ಗಿ ತಾಲ್ಲೂಕಿನ ಅಂದೋಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಜೈನಾಪುರದಲ್ಲಿ ಇತ್ತೀಚೆಗೆ ಚುನಾವಣೆ ವಿಜಯೋತ್ಸವ ನಡೆದಿತ್ತು. ವಿಜೇತ ಅಭ್ಯರ್ಥಿ ರಾಜು ಬೆಂಬಲಿಗರು ಪರಾಜಿತ ಅಭ್ಯರ್ಥಿ ಸಂತೋಷ ಅವರ ಮನೆ ಮುಂದೆ ಪಟಾಕಿ ಹಾರಿಸಿದ್ದರು.
ಹೊರಗೆ ಬಂದ ಸಂತೋಷ ಅವರ ತಮ್ಮ ರವಿ ಹಾಗೂ ಅವರ ಪತ್ನಿ ಸಂಗೀತಾ ಇದನ್ನು ಪ್ರಶ್ನಿಸಿದರು. ಬಿಜೆಪಿ ಬೆಂಬಲಿತ ವಿಜೇತ ಅಭ್ಯರ್ಥಿ ರಾಜು ಅವರು ಸಂತೋಷ, ಸಂಗೀತಾ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಸ್ಥಳಕ್ಕೆ ಬಂದ ಪೊಲೀಸರು ಸಂಗೀತಾ ಅವರನ್ನು ಥಳಿಸಿದ್ದರು ಎನ್ನಲಾಗಿದೆ. ನಂತರ ಜೈಲಿಗೆ ಕರೆದೊಯ್ಯಲಾಗಿತ್ತು. ಮಗುವನ್ನೂ ಸಂಗೀತಾ ಕರೆದೊಯ್ದಿದ್ದರು. ಆ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾಗಿದೆ ಎಂಬ ಆರೋಪಗಳು ಕೇಳಿ ಬಂದಿವೆ.
ಸಂತೋಷ ಕಡೆಯವರು ದೂರು ದಾಖಲಿಸಿದ್ದರೂ ಜೇವರ್ಗಿ ಪಿಎಸ್ಐ ಮಂಜುನಾಥ ಹೂಗಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಮಾಜಿ ಶಾಸಕರೊಬ್ಬರ ಕುಮ್ಮಕ್ಕಿನ ಮೇಲೆ ಪಿಎಸ್ಐ ಸಂತೋಷ ಹಾಗೂ ಸಂಗೀತಾರನ್ನು ಥಳಿಸುವ ಮೂಲಕ ಅವರ ಮಗು ಭಾರತಿ ಸಾವಿಗೆ ಕಾರಣರಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸುತ್ತಿದ್ದಾರೆ.