ಕಲಬುರ್ಗಿ: ಮಹಾನಗರ ಪಾಲಿಕೆಯ 377 ದಿನಗೂಲಿ ಪೌರ ಕಾರ್ಮಿಕರನ್ನು ಕಾಯಂಗೊಳಿಸದೆ ಬೇರೆ ಪೌರ ಕಾರ್ಮಿಕರನ್ನು ನೇಮಕ ಮಾಡಿದ್ದನ್ನು ಖಂಡಿಸಿ, ಪೌರ ಕಾರ್ಮಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾವಣೆಗೊಂದ ಪೌರಕಾರ್ಮಿಕರು ಅಧಿಕಾರಿಗಳ ಕ್ರಮಕ್ಕೆ ಆಕ್ರೋಶ ಹೊರಹಾಕಿದರು.
ಕಲಬುರ್ಗಿ ಮಹಾನಗರ ಪಾಲಿಕೆಯಲ್ಲಿ 377 ಪೌರ ಕಾರ್ಮಿಕರು 26 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದೇವು. ನಮ್ಮಲ್ಲಿ ಈಗಾಗಲೇ ಹಲವಾರು ಪೌರ ಕಾರ್ಮಿಕರು ಮರಣ ಹೊಂದಿದ್ದಾರೆ. ಉಳಿದವರು ಇನ್ನೂ ದುಡಿಯುತ್ತಿದ್ದೇವೆ. ನಮ್ಮನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಪೌರಕಾರ್ಮಿಕರನ್ನು ಕಾಯಂಗೊಳಿಸುವಂತೆ ಸಾಕಷ್ಟು ಬಾರಿ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿದ್ದೇವೆ. ಹೋರಾಟ ಸಂದರ್ಭದಲ್ಲಿ ಪಾಲಿಕೆಯ ದಿನಗೂಲಿ ಪೌರ ಕಾರ್ಮಿಕರೆಂದು ನ್ಯಾಯಾಲಯ ಆದೇಶ ನೀಡಿದೆ. ಆದರೂ ಅಧಿಕಾರಿಗಳು ಆದೇಶ ಪಾಲಿಸಿಲ್ಲ ಎಂದೂ ದೂರಿದರು.
ಈ ಹಿಂದೆ ಜಿಲ್ಲಾ ಮಟ್ಟದಲ್ಲಿ ಅನೇಕ ಸಭೆಗಳು ನಡೆದಿದ್ದು, 377 ಪೌರ ಕಾರ್ಮಿಕರನ್ನು ಕಾಯಂಗೊಳಿಸುವ ಸಂದರ್ಭದಲ್ಲಿ ಸೇವೆ ಪರಿಗಣಿಸಿ ಕಾಯಂ ನೇಮಕ ಮಾಡಿಕೊಳ್ಳಬೇಕು ಎಂದು ನಿಯಮ ಮಾಡಲಾಗಿದೆ. ಆದರೆ, ಏ.6ರಂದು ತಾತ್ಕಾಲಿಕ ಪಟ್ಟಿ ಪ್ರಕಟಿಸಿದ್ದು, ಇದರಲ್ಲಿ ನಮ್ಮನ್ನು ಕೈ ಬಿಡಲಾಗಿದೆ ಎಂದೂ ಹೇಳಿದರು.
ಜಿಲ್ಲಾಧಿಕಾರಿ ಕೂಡಲೇ ಮಧ್ಯಪ್ರವೇಶಿಸಿ ಪೌರಕಾರ್ಮಿಕರ ನೇರ ನೇಮಕಾತಿ ಮತ್ತು ನೇರ ಪಾವತಿ ತಾತ್ಕಾಲಿಕ ಪಟ್ಟಿ ರದ್ದುಪಡಿಸಿ 377 ದಿನಗೂಲಿ ಪೌರಕಾರ್ಮಿಕ ಸೇವೆ ಪರಿಗಣಿಸಿ ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು. ಬೇಡಿಕೆ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.