ವಾಡಿ: ಚಿಂಚೋಳಿ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಈಚೆಗೆ ಜರುಗಿದ ಅತ್ಯಾಚಾರ ಹಾಗೂ ಕೊಲೆ ಘಟನೆಗಳನ್ನು ಖಂಡಿಸಿ ಶನಿವಾರ ಇಲ್ಲಿ ಎಸ್ಡಿಪಿಐ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಮೌಲಾನ ಅಬ್ದುಲ್ ಕಲಾಂ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾಗಿ ಅಂಬೇಡ್ಕರ್ ವೃತ್ತದಲ್ಲಿ ಸಮಾವೇಶಗೊಂಡಿತು.
ಸಂಘಟನೆಯ ಸ್ಥಳೀಯ ಅಧ್ಯಕ್ಷ ಮಹಮದ್ ಅಸೀಫ್ ಪಗಡಿವಾಲೆ ಮಾತನಾಡಿ, 'ಅತ್ಯಾಚಾರ ಪ್ರಕರಣಗಳು ಪದೇ ಪದೇ ಜರುಗುತ್ತಿದ್ದು, ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗುತ್ತಿದೆ. ಹಾಡಹಗಲೇ ಇಂಥ ಘಟನೆಗಳು ಸಂಭವಿಸುತ್ತಿರುವುದು ಮಹಿಳೆಯರಲ್ಲಿ ಆತಂಕಕ್ಕೆ ಕಾರಣವಾಗಿದೆ’ ಎಂದರು.
‘ಮಹಿಳೆಯರ ಮೇಲಿನ ಅತ್ಯಾಚಾರ ಹಾಗೂ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅತ್ಯಾಚಾರ ನಡೆಸಿದವರಿಗೆ ಕೂಡಲೇ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.