‘ಮಾನವ ಮಾನವನನ್ನು ದೂರ ಸರಿಸುವ ಹುನ್ನಾರ’

ಕಲಬುರ್ಗಿ: ಮಾನವ ಮಾನವನನ್ನು ದೂರವಿಡುವ ಹುನ್ನಾರ ನಡೆಯುತ್ತಿದೆ. ನಿಜವಾದ ಇತಿಹಾಸವನ್ನು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ತಿಳಿಸಿ ಸರಿ ಮಾಡಬೇಕಿದೆ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಪ್ರೊ.ಎಸ್.ಪಿ.ಮೇಲ್ಕೇರಿ ಅಭಿಪ್ರಾಯಪಟ್ಟರು.
ಭಾನುವಾರ ನಗರದಲ್ಲಿ ನಡೆದ ಎಸ್ಎಫ್ಐ ರಾಜ್ಯ ಅಧ್ಯಯನ ಶಿಬಿರದಲ್ಲಿ ಅವರು ಮಾತನಾಡಿದರು.
ಶಿಕ್ಷಣ ನೀತಿಯನ್ನು ಸಂಪೂರ್ಣವಾಗಿ ದೈವೀಕರಿಸಿ ಮನುಷ್ಯ ಮನುಷ್ಯನನ್ನು ದೂರೀಕರಿಸುವ ಪ್ರಯತ್ನ ನಡೆಯುತ್ತಿದೆ. ಗ್ರಾಮೀಣ ಭಾರತದ ಬದುಕನ್ನು ರೂಪಿಸುವ ನೀತಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಇಲ್ಲ. ಗ್ರಾಮೀಣ ಪ್ರದೇಶದ ಶಾಲೆಯಲ್ಲಿ ಶಿಕ್ಷಕರಿಲ್ಲ, ಮೂಲ ಸೌಕರ್ಯಗಳಿಲ್ಲ, ಇಂಟರ್ನೆಟ್ ಇಲ್ಲ, ರಸ್ತೆ, ಸಾರಿಗೆ ಇಲ್ಲ. ಇವುಗಳ ಬಗ್ಗೆ ಆಳುವ ವರ್ಗ ವ್ಯವಸ್ಥಿತವಾಗಿ ನಿರ್ಲಕ್ಷ್ಯಿಸಲಾಗಿದೆ ಎಂದು ಆರೋಪಿಸಿದರು.
ಶೋಷಿತರನ್ನು ಮೇಲೆತ್ತುವುದಕ್ಕಾಗಿ ಮೀಸಲಾತಿ ನೀಡಲಾಗುತ್ತಿದೆ. ಇನ್ನೂ ನಮ್ಮಲ್ಲಿ ಜಾತೀಯತೆ, ಅಸ್ಪೃಶ್ಯತೆ, ಅಸಮಾನತೆ ಇದೆ. ಇಲ್ಲಿಯವರೆಗೂ ಅದನ್ನು ಸಂಪೂರ್ಣವಾಗಿ ತೊಡೆದು ಹಾಕಲು ಹಾಗಿಲ್ಲ. ಇದಕ್ಕೆ ಕಾರಣ ನಾವು ಪಡೆಯುತ್ತಿರುವ ಶಿಕ್ಷಣ ಪೂರಕವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮೌಲ್ಯಯುತ ಶಿಕ್ಷಣ ಎಲ್ಲೂ ಕಳೆದಿಲ್ಲ. ಬದಲಾಗಿ ನಾವು ನಡೆದಾಡುವ ದಾರಿಯಲ್ಲಿ ಅದನ್ನು ಕಳೆದುಕೊಂಡಿದ್ದೇವೆ. ನಮ್ಮ ಆಶಯಗಳನ್ನು ಕಾಪಾಡುವವರು ಯಾರು ಅನ್ನೋದನ್ನು ನಾವು ಯೋಚಿಸಬೇಕಿದೆ ಎಂದರು.
ರಾಜ್ಯ ಅಂಗನವಾಡಿ ನೌಕರರ ಸಂಘಟನೆ ರಾಜ್ಯ ಮುಖಂಡೆ ಗೌರಮ್ಮ ಪಾಟೀಲ ಮಾತನಾಡಿದರು.
ಕರ್ನಾಟಕದ ಪ್ರಾಂತ ರೈತ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಮಶೆಟ್ಟಿ, ಕಾರ್ಯದರ್ಶಿ ಅಶೋಕ ಮ್ಯಾಗೇರಿ, ಸಿಐಟಿಯು ಕಾರ್ಮಿಕ ಸಂಘಟನೆಯ ಮುಖಂಡರಾದ ಕೃಷ್ಣ, ಪಾಂಡುರಂಗ, ಅಷ್ಪಾಕ್, ಸುಧಾಮ ದನ್ನಿ, ಪೌರ ಕಾರ್ಮಿಕ ಸಂಘಟನೆಯ ಚಿತ್ರಾಬಾಯಿ, ಎಸ್ಎಫ್ಐ ರಾಜ್ಯ ಘಟಕದ ಅಧ್ಯಕ್ಷ ವಿ.ಅಂಬರೀಶ, ಕಾರ್ಯದರ್ಶಿ ಗುರುರಾಜ ದೇಸಾಯಿ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.