‘ಪರಿಷತ್ತಿನ ಹಿಂದಿನ ಅಧ್ಯಕ್ಷರ ಕೈಗೊಂಡ ಯೋಜನೆಗಳನ್ನು ಮುಂದುವರಿಸುವುದರ ಜತೆಗೆ ವಚನ ಸಾಹಿತ್ಯ, ದಾಸ ಸಾಹಿತ್ಯ, ಮಹಿಳಾ ಸಾಹಿತ್ಯ ಸಮಾವೇಶ ಆಯೋಜಿಸಲಾಗುವುದು. ಪ್ರೌಢ ಶಾಲೆಯಿಂದ ಸ್ನಾತಕೋತ್ತರ ಹಂತದ ವಿದ್ಯಾರ್ಥಿಗಳಿಗೆ ಹಳಗನ್ನಡ ಹಾಗೂ ಆಧುನಿಕ ಸಾಹಿತ್ಯದ ಮರು ಓದು, ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಅಪರೂಪದ ಮೌಲಿಕ ಗ್ರಂಥಗಳ ಮರುಮುದ್ರಣ ಮಾಡಲಾಗುವುದು. ಹೊರನಾಡು–ಹೊರಪ್ರದೇಶ ಕನ್ನಡಿಗರ ಉತ್ತಮ ಕೃತಿಗಳ ಪ್ರಕಟಣೆ ಮಾಡಲು ವಿಶೇಷ ಯೋಜನೆ ಜಾರಿ ಮಾಡಲಾಗುವುದು. ಪರಿಷತ್ತಿನ ಪ್ರಕಟಣೆಗಳ ಡಿಜಿಟಲೀಕರಣ ಹಾಗೂ ಪರಿಷತ್ತು ಪ್ರಕಟಿಸಿರುವ ಪುಸ್ತಕಗಳ ಆನ್ಲೈನ್ ಮಾರಾಟ ವ್ಯವಸ್ಥೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.