ಕಲಬುರಗಿ: ‘ಭಾರತೀಯ ಅರಿವಳಿಕೆ ತಜ್ಞರ ಸಂಘದ (ಐಎಸ್ಎ) ರಾಜ್ಯ, ಕಲಬುರಗಿ ಮತ್ತು ಬೀದರ್ ಜಿಲ್ಲಾ ಘಟಕಗಳ ವತಿಯಿಂದ ಅರಿವಳಿಕೆ ತಜ್ಞ ವೈದ್ಯರ 36ನೇ ರಾಜ್ಯಮಟ್ಟದ ಸಮ್ಮೇಳನ ಸೆಪ್ಟೆಂಬರ್ 16ರಿಂದ 18ರವರೆಗೆ ನಡೆಯಲಿದೆ’ ಎಂದು ಸಂಘದ ಅಧ್ಯಕ್ಷ ಡಾ.ಗಜೇಂದ್ರ ಸಿಂಗ್ಹೇಳಿದರು.
‘ಅಂದು ಸಂಜೆ 6.30ಕ್ಕೆ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸ್ಯಾಕ್ ಕಟ್ಟಡದಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್ಪರ್ಸನ್ ಡಾ.ದಾಕ್ಷಾಯಿಣಿ ಎಸ್ ಅಪ್ಪ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಸಿ.ಬಿಲಗುಂದಿ ಪಾಲ್ಗೊಳ್ಳುವರು’ ಎಂದು ಅವರು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಐಎಸ್ಎ ರಾಜ್ಯ ಘಟಕದ ಅಧ್ಯಕ್ಷ ಡಾ. ಎಚ್ಜಿ ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದು, ಕಾರ್ಯದರ್ಶಿ ಡಾ.ಶಿವಕುಮಾರ, ಕೋಶಾಧಿಕಾರಿ ಡಾ.ಸಂಧ್ಯಾ, ಎಂಆರ್ಎಂ ಕಾಲೇಜು ಮುಖ್ಯಸ್ಥ ಡಾ.ಎಸ್.ಎಂ ಪಾಟೀಲ, ಪ್ರಾಚಾರ್ಯ ಡಾ.ಶರಣಗೌಡ ಅವರು ಭಾಗವಹಿಸುವರು’ ಎಂದರು.
ಸಂಘಟನಾ ಕಾರ್ಯದರ್ಶಿ ಡಾ.ಪ್ರತಿಮಾ ಕಾಮರೆಡ್ಡಿ ಮಾತನಾಡಿ, ‘ಸಮ್ಮೇಳನದ ಪ್ರಯುಕ್ತ ಭಾನುವಾರ (ಸೆ.10) ಬೆಳಿಗ್ಗೆ 6.30ಕ್ಕೆ ಬಸವೇಶ್ವರ ಆಸ್ಪತ್ರೆಯಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದವರೆಗೆ ಅರಿವಳಿಕೆ ಕುರಿತ ಜನಜಾಗೃತಿ ಜಾಥಾ ನಡೆಸಲಾಗುವುದು. ವೃತ್ತದಲ್ಲಿ ಅರಿವಳಿಕೆ ಬಗ್ಗೆ ವಿದ್ಯಾರ್ಥಿಗಳು ಅಣುಕ ಪ್ರದರ್ಶನ ನೀಡುವರು’ ಎಂದು ಮಾಹಿತಿ ನೀಡಿದರು.
‘ಸಮ್ಮೇಳನಕ್ಕೆ 6 ಜನ ಅಂತರರಾಷ್ಟ್ರೀಯ ಹಾಗೂ 10ಕ್ಕೂ ಅಧಿಕ ರಾಷ್ಟ್ರ ಮಟ್ಟದ ತಜ್ಞರು ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡುವರು. ರಾಜ್ಯಮಟ್ಟದ ತಜ್ಞರೂ ಪಾಲ್ಗೊಂಡು ತಮ್ಮ ಜ್ಞಾನ ಹಂಚಿಕೊಳ್ಳಲಿದ್ದು, ಈ ಭಾಗದ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಈಗಾಗಲೇ ಸಾವಿರಾರು ವೈದ್ಯರು ಸಮ್ಮೇಳನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ’ ಎಂದರು.
‘ನಗರದ ಎಲ್ಲಾ ವೈದ್ಯಕೀಯ ವಿಜ್ಞಾನ ಕಾಲೇಜುಗಳು ಸಮ್ಮೇಳನದಲ್ಲಿ ತೊಡಗಿಸಿಕೊಂಡಿದ್ದು, ಪ್ರಾಯೋಗಿಕ ಕಲಿಕಾ ವಿಷಯಗಳ ಮಂಡನೆಯು ಕೆಬಿಎನ್, ಎಂಆರ್ಎಂಸಿ ಸೇರಿದಂತೆ ಇತರೆ ಕಾಲೇಜುಗಳಲ್ಲಿ ನಡೆಯಲಿದೆ’ ಎಂದು ಅವರು ತಿಳಿಸಿದರು. ಸಂಘದ ಉಪಾಧ್ಯಕ್ಷ ಡಾ.ಗುರುಲಿಂಗಪ್ಪ ಪಾಟೀಲ, ವೈಜ್ಞಾನಿಕ ಸಮಿತಿ ಮುಖ್ಯಸ್ಥ ಡಾ.ಸುಧರ್ಶನ ಲಖೆ, ಎಚ್ಕೆಇ ಆಡಳಿತ ಮಂಡಳಿ ಸದಸ್ಯ ಡಾ.ಅನಿಲ್ಕುಮಾರ್ ಬಿ ಪಟ್ಟಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.