ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ಗೆ ಒತ್ತಾಯಿಸಿ ಪ್ರತಿಭಟನೆ

Last Updated 20 ಜನವರಿ 2021, 2:14 IST
ಅಕ್ಷರ ಗಾತ್ರ

ಕಲಬುರ್ಗಿ: ರಾಜ್ಯ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಗೋಹತ್ಯೆ ನಿಷೇಧ ಕಾಯ್ದೆಯಿಂದಾಗಿ ಗ್ರಾಮೀಣ ಬಡಕುಟುಂಬಗಳಿಗೆ ಸಾಕಷ್ಟು ಆರ್ಥಿಕ ನಷ್ಟವುಂಟಾಗಲಿದ್ದು, ಕೂಡಲೇ ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ಕಾರ್ಯಕರ್ತರು ನಗರದ ವಕ್ಫ್‌ ಮಂಡಳಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಸುಗ್ರೀವಾಜ್ಞೆಯ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿದ್ದು ಅಸಂವಿಧಾನಿಕ ಕ್ರಮವಾಗಿದೆ. ಈ ಕಾಯ್ದೆಯು ಕೃಷಿ ಕುಟುಂಬಗಳ ಆದಾಯವನ್ನು ವಿಶೇಷವಾಗಿ ಗ್ರಾಮೀಣ ಬಡವರ ಮೇಲೆ ಪರಿಣಾಮ ಬೀರುತ್ತವೆ. ಅಲ್ಪಸಂಖ್ಯಾತರು ಹಾಗೂ ದಲಿತರನ್ನು ಗುರಿಯಾಗಿಸಿಕೊಂಡು ಸಂಘಪರಿವಾರದ ಆಣತಿಯಂತೆ ಬಿಜೆಪಿ ಸರ್ಕಾರ ಇಂತಹ ಜನವಿರೋಧಿ ಕಾಯ್ದೆಯನ್ನು ಜಾರಿಗೆ ತಂದಿದೆ. ಇದನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪಶುಸಂಗೋಪನೆ ದೇಶದ ಜಿಡಿಪಿಯಲ್ಲಿ ಶೇ 7.35ರಷ್ಟಿದ್ದರೆ, ಕೃಷಿಯ ಪಾಲು ಶೇ 28ರಷ್ಟಿದೆ. ರೈತರ ಮನೆಯ ಆದಾಯದ ಶೇ 30ರಷ್ಟು ಭಾಗ ದನ ಹಾಗೂ ದನಗಳ ಉತ್ಪನ್ನದಿಂದ ಬರುತ್ತದೆ. ಭಾರತದಲ್ಲಿ ಶೇ 50ರಷ್ಟು ದನಗಳು 2.5 ಎಕರೆಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತರ ಒಡೆತನದಲ್ಲಿವೆ. ಕೃಷಿಗಾಗಿ ಬೀಜ ಗೊಬ್ಬರ ಖರೀದಿಸಲು, ಎಳೆಯ ದನಗಳನ್ನು ಖರೀದಿಸಲು, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಹಾಗೂ ವಿವಾಹದಂತಹ ತುರ್ತು ಅವಶ್ಯಕತೆಗಳಿಗಾಗಿ ತಮ್ಮ ದನಗಳನ್ನು ಮಾರಬೇಕಾಗುತ್ತದೆ. ಈ ಕಾಯ್ದೆಯಿಂದ ಮಾರಾಟ ಪ್ರಕ್ರಿಯೆ ದೊಡ್ಡ ಸವಾಲಾಗಲಿದ್ದು, ಬಡ ಗ್ರಾಮೀಣ ರೈತರ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT