ಕಲಬುರ್ಗಿ: ಕಮಲಾಪುರ ತಾಲ್ಲೂಕಿನ ಶ್ರೀಚಂದ ಪಂಚಾಯಿತಿ ವ್ಯಾಪ್ತಿಯಲ್ಲಿ ಬಂಡಿಂಗ್ ಹಾಗೂ ಹಳ್ಳ ಹೂಳೆತ್ತುವ ಕಾಮಗಾರಿ ಮಾಡಿ ನಾಲ್ಕು ತಿಂಗಳಾದರೂ ಇನ್ನೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಹಣ ಪಾವತಿಯಾಗಿಲ್ಲ ಎಂದು ಆರೋಪಿಸಿ ಕರ್ನಾಟಕ ಕೃಷಿ ಕೂಲಿಕಾರರ ಸಂಘದ ಸದಸ್ಯರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
‘ಅಪಚಂದ, ಹೊಡಲ್, ಕೊಟ್ಟರಗಾ, ಜವಳಗಾ (ಬಿ) ಗ್ರಾಮಗಳಲ್ಲಿ ಸುಮಾರು 700 ಕಾರ್ಮಿಕರು ಕೆಲಸ ಮಾಡಿದ್ದಾರೆ. ಇವರಿಗೆ ನಾಲ್ಕು ತಿಂಗಳಿಂದ ಖಾತೆಗೆ ಕೂಲಿ ಹಣ ಜಮಾ ಆಗಿಲ್ಲ. ಇದರಿಂದಾಗಿ ಮನೆ ನಡೆಸುವುದು ದುಸ್ತರವಾಗಿದೆ. ಗ್ರಾಮ ಪಂಚಾಯಿತಿ ಪಿಡಿಒ, ತಾಲ್ಲೂಕು ಪಂಚಾಯಿತಿ ಇಒ, ನರೇಗಾ ನೋಡಲ್ ಅಧಿಕಾರಿಗಳ ಗಮನಕ್ಕೆ ತಂದರೂ ಇನ್ನೂ ಕೂಲಿ ಹಣ ಕೊಟ್ಟಿಲ್ಲ. ಇದರಿಂದ ಬಡ ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ’ ಎಂದು ಪ್ರತಿಭಟನಾಕಾರರು ದೂರಿದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಶ್ರೀ ಕಟ್ಟಿಮನಿ, ಮುಖಂಡರಾದ ಮಲ್ಲಪ್ಪ ಹೊಡಲ್, ಲಕ್ಷ್ಮಿಬಾಯಿ ಸಿಂಗ್ ಜವಳಗಾ, ನಟರಾಜ ಅಪಚಂದ, ರತ್ನಾಬಾಯಿ ಹೊಡಲ್, ಶಾಂತಾಬಾಯಿ ಹೊಡಲ್, ಸಾವಿತ್ರಿ ಹೊಡಲ್, ಅನ್ನಪೂರ್ಣ ಕೊಟ್ರಿರಿ, ಲಕ್ಷ್ಮಿಕಾಂತ ಅಪಚಂದ ಇದ್ದರು.