ಕಲಬುರ್ಗಿ: ತಾಲ್ಲೂಕಿನ ಅವರಾದ, ಮಹಾಗಾಂವ ಹಾಗೂ ಕಮಲಾಪೂರ ರೈತ ಸಂಪರ್ಕ ಕೇಂದ್ರಗಳಿಗೆ ಮಂಗಳವಾರ ಭೇಟಿ ನೀಡಿದ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುವರ್ಣಾ ಮಾಲಾಜಿ ಅವರು ಬಿತ್ತನೆ ಬೀಜಗಳ ದಾಸ್ತಾನು ಪರಿಶೀಲಿಸಿದರು.
‘ಮುಂಗಾರು ಆರಂಭವಾದ ಕಾರಣ, ಬಿತ್ತನೆ ಕಾರ್ಯ ಚುರುಕುಗೊಳ್ಳಲಿದೆ. ರೈತರಿಗೆ ಬೇಕಾದ ಬಿತ್ತನೆ ಬೀಜಗಳು ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನಿನಲ್ಲಿ ಲಭ್ಯವಿದ್ದು, ರೈತರು ಆತಂಕ ಪಡಬೇಕಿಲ್ಲ’ ಎಂದು ಸುವರ್ಣಾ ಹೇಳಿದರು.
‘ರೈತರು ಅಂತರ ಕಾಯ್ದುಕೊಂಡು ಬೀಜಗಳನ್ನು ತೆಗೆದುಕೊಳ್ಳತ್ತಿರುವುದು ಸಮಾಧಾನದ ಸಂಗತಿ. ಕೃಷಿ ಕಾರ್ಯಗಳ ಜತೆಗೇ ನಾವು ಕೊರೊನಾದಿಂದ ಸುರಕ್ಷಿತವಾಗಿ ಇರುವ ಬಗ್ಗೆಯೂ ಕಾಳಜಿ ವಹಿಸಬೇಕಿದೆ’ ಎಂದು ಸಲಹೆ ನೀಡಿದರು.
ರೈತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಬೀಜಗಳನ್ನು ವಿತರಿಸಲು ಕೃಷಿ ಅಧಿಕಾರಿಗಳಿಗೆ ಅಧ್ಯಕ್ಷೆ ಸೂಚಿಸಿದರು. ಸಹಾಯಕ ಕೃಷಿ ನಿರ್ದೇಶಕ ಚಂದ್ರಕಾಂತ ಜೀವಣಗಿ, ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಮುಖಂಡ ಹಣಮಂತರಾಯ ಮಾಲಾಜಿ ಇದ್ದರು.