ಸುಂಟಿಕೊಪ್ಪ: ಇಲ್ಲಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ಹಳೆಯ ವಿದ್ಯಾರ್ಥಿಗಳ 'ಚಡ್ಡಿದೋಸ್ತ್' ಬಳಗ ಗುಡ್ಡೆಹೊಸೂರು ಐಚೆಟ್ಟೀರ ನರೇನ್ ಸೋಮಯ್ಯ ಸ್ಪೋರ್ಟ್ಸ್ ಸೆಂಟರ್ ಮೈದಾನದಲ್ಲಿ ಆಯೋಜಿಸಿದ್ದ 5ನೇ ವರ್ಷದ ಟೆನಿಸ್ ಬಾಲ್ ಕ್ರಿಕೆಟ್ ಸೌಹಾರ್ದ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಶಿಕ್ಷಕರ ತಂಡ ಪ್ರಥಮ ಸ್ಥಾನ ಪಡೆದಿದೆ. ಚಡ್ಡಿದೋಸ್ತ್ 'ಎ' ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
ಟೆನಿಸ್ ಬಾಲ್ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಚಡ್ಡಿದೋಸ್ತ್ 'ಎ' ಮತ್ತು 'ಬಿ' ತಂಡ, ಕೊಡಗು ಶಿಕ್ಷಕರ ತಂಡ, ಅರಣ್ಯ ಇಲಾಖೆ ಮತ್ತು ಕೊಡಗು ಪ್ರೆಸ್ ಕ್ಲಬ್ ತಂಡಗಳು ಭಾಗವಹಿಸಿದ್ದವು.
ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಕೊಡಗು ಶಿಕ್ಷಕರ ತಂಡ ಮತ್ರು ಚಡ್ಡಿದೋಸ್ತ್ 'ಎ' ತಂಡಗಳ ನಡುವೆ ನಡೆಯಿತು.ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚಡ್ಡಿದೋಸ್ತ್ ತಂಡ ನಿಗಧಿತ 6 ಓವರುಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡು 48 ರನ್ ಬಾರಿಸಿತು 49 ರನ್ನುಗಳ ಗುರಿ ಬೆನ್ನಟ್ಟಿದ್ದ ಕೊಡಗು ಶಿಕ್ಷಕರ ತಂಡ ಆಕರ್ಷಕ ಆಟದ ಪ್ರದರ್ಶನದಿಂದ ಕೇವಲ 4 ಓವರುಗಳಿಗೆ 50 ರನ್ನುಗಳನ್ನು ಹೊಡೆದು ವಿಜಯದ ನಗೆಯೊಂದಿಗೆ ಸತತ ನಾಲ್ಕನೇ ಬಾರಿ ' ಚಡ್ಡಿದೋಸ್ತ್' ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಾಚಾರ್ಯ ಜಾನ್ ಪ್ರಾನ್ಸಿಸ್ , ಕ್ರೀಡಾಕೂಟ ಒಂದು ನೆಪಮಾತ್ರ. ಸಹಪಾಠಿಗಳನ್ನು ಒಂದೆಡೇ ಸೇರಿಸುವ ಬಾಂಧವ್ಯದ ಕೊಂಡಿಯಾಗಿದೆ. ವಿದ್ಯಾಭ್ಯಾಸ ಮುಗಿಸಿ ಹೊರಹೋದ ನಂತರ ಮತ್ತೆ ಒಟ್ಟುಗೂಡಿಸುವುದು ಬಹಳ ಕಷ್ಟದ ಕೆಲಸ. ಆ ಕೆಲಸ ಚಡ್ಡಿದೋಸ್ತ್ ಹೆಸರಿನ ಮೂಲಕ ಆಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂಪಿ.ನಾಗಮ್ಮ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಗುರುಗಳನ್ನು ಮರೆಯುವಂತಹ ಸಂದರ್ಭದಲ್ಲಿ ನಮ್ಮ ಮೇಲೆ ಗೌರವ ನೀಡಿ ಅಭಿನಂಧಿಸಿರುವುದು ಸಂತೋಷ ತಂದಿದೆ ಎಂದರು.
ಹಳೆ ವಿದ್ಯಾರ್ಥಿಗಳಾದ ಬೆಂಗಳೂರು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಬಿ.ಟಿ.ಕಿಶೋರ್, ಆಯುಷ್ ಇಲಾಖೆಯ ಕರುಣಾಕರ , ಗುರುಗಳಾದ ಜಾನ್ ಪ್ರಾನ್ಸಿಸ್ ಮತ್ತು ಎಂ.ಪಿ.ನಾಗಮ್ಮ ಅವರನ್ನು ಗೌರವಿಸಲಾಯಿತು. ಅತಿಥಿಗಳು ಪ್ರಥಮ ಹಾಗೂ ದ್ಚಿತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಿದರು. ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಷಕರ ತಂಡದ ವಿಜಯ್ ಮತ್ತು ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಶಿಕ್ಚಕ ತಂಡದ ಆಟಗಾರ ನಾಸೀರ್ ಪಡೆದುಕೊಂಡರು.
ಸೌಹಾರ್ದ ಕ್ರಿಕೆಟ್ ಟೂರ್ನಿಗೆ ಗುಡ್ಡೆಹೊಸೂರು ಐಎನ್ಎಸ್ ಅಕಾಡಮಿಯ ಮಾಲೀಕ ಐಚೆಟ್ಟೀರ ಸೋಮಯ್ಯಚಾಲನೆ ನೀಡಿದರು. ಚಡ್ಡಿದೋಸ್ತ್ ಬಳಗದ ಅಧ್ಯಕ್ಷ ಕೆ.ಕೆ.ಹರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಚಡ್ಡಿದೋಸ್ತ್ ಬಳಗದ ಸ್ಥಾಪಕಾಧ್ಯಕ್ಷ ಮೋಹನ್, ಎ ತಂಡದ ನಾಯಕ ಸುರೇಶ್, ಬಿ ತಂಡದ ನಾಯಕ ಬಾಲಕೃಷ್ಣ, ಸಂಚಾಲಕ ನವೀನ್, ಬಳಗದ ಉಮ್ಮರ್, ಕೆ.ಎಂ.ವಿನೋದ್, ರಾಘವೇಂದ್ರ, ರಾಕೇಶ್, ಅರುಣ್ ರೈ ಚಂದ್ರ, ಹೇಮಂತ್ ಮಣಿ, ಹರೀಶ್, ಹೇಮಂತ್,ಸಂದೀಪ್, ರಫೀಕ್ ಸೇರಿದಂತೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.