ಸುಂಟಿಕೊಪ್ಪ: ಸಮೀಪದ ಪನ್ಯ ಗ್ರಾಮದ ಉದ್ಧಿಬಾಣೆ ಮಠದಲ್ಲಿ ಧರ್ಮ ದೈವಗಳ ನೇಮೋತ್ಸವ ಶನಿವಾರ ಮತ್ತು ಭಾನುವಾರ ಶ್ರದ್ಧಾಭಕ್ತಿಯಿಂದ ನಡೆಯಿತು.
ಶನಿವಾರ ಗಣ ಹೋಮ, ಸತ್ಯ ನಾರಾಯಣ ಪೂಜೆ ಮಾಡಿಸಿ ನೇಮ ಮತ್ತು ದೇವತಾ ಕಾರ್ಯಕ್ಕೆ ವಿಘ್ನ ಬಾರದಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ರಾತ್ರಿ 8 ಗಂಟೆಗೆ ಭಂಡಾರ ತೆಗೆಯುವ ಮೂಲಕ ನೇಮೋತ್ಸವಕ್ಕೆ ಚಾಲನೆ ದೊರಕಿತು. ನಂತರ ಕಲ್ಲುರ್ಟಿ ದೈವದ ಕೋಲದಲ್ಲಿ ತನ್ನ ಶಕ್ತಿಯನ್ನು ತೋರ್ಪಡಿಸಿ ನೆರೆದಿದ್ದ ಭಕ್ತರಲ್ಲಿ ದೈವ ನಡುಕ ಹುಟ್ಟಿಸಿತು.
ಭಾನುವಾರ ಮುಂಜಾನೆಯಿಂದ ಪಂಜುರ್ಲಿ ಮತ್ತು ಗುಳಿಗ ದೈವದ ನೇಮವು ನಡೆಯಿತು. ಕಾರಣಿಕ ದೈವ ಎನಿಸಿದ ಕೊರಗಜ್ಹ ದೈವದ ನೇಮವು ನಡೆಯಿತು. ದೇವಾಲಯ ಸೇರಿದಂತೆ ಭಕ್ತರ ಹರಕೆಯ ಒಟ್ಟು 4 ಕೊರಗಜ್ಜ ದೈವದ ನೇಮವು ನಡೆದು ಭಕ್ತರಲ್ಲಿ ನಿಜ ಸ್ವರೂಪ ಪ್ರತಿಬಿಂಬಿಸಿತು. ಮಕ್ಕಳ ಜೊತೆ ಕುಣಿದು ಹಾಸ್ಯ ಮಾಡುತ್ತಾ ಎಲ್ಲರನ್ನೂ ಸಂತೃಪ್ತಿ ಪಡಿಸಿತು.
ಭಕ್ತರಿಗೆ ಎರಡು ದಿನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ಸುಂಟಿಕೊಪ್ಪ, ಕುಶಾಲನಗರ, ಮಡಿಕೇರಿ, ಪನ್ಯ, ಗರಗಂದೂರು, ಮಾದಾಪುರ, ಸುಳ್ಯ, ಪುತ್ತೂರು, ಮಂಗಳೂರು, ಮೈಸೂರು ಸೇರಿದಂತೆ ಹಲವು ಕಡೆಗಳಿಂದ ಬಂದಿದ್ದ ಭಕ್ತರು ದೈವದಲ್ಲಿ ಬೇಡಿಕೆ ಮತ್ತು ಹರಕೆ ಅರ್ಪಿಸಿದರು.