ಸೋಮವಾರಪೇಟೆ: ಮದುವೆ ಹಿಂದಿನ ದಿನ ಸಿಹಿತಿಂಡಿ ನೀಡಿಲ್ಲ ಎಂಬ ಕಾರಣಕ್ಕೆ ಮದುವೆಯನ್ನೇ ರದ್ದುಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಮದುವೆಯ ವರ ಹರ್ಷಿತ್, ಆತನ ತಾಯಿ, ಅಣ್ಣ, ಅತ್ತಿಗೆ, ಸೋದರಮಾವ ಸೇರಿದಂತೆ ಒಟ್ಟು ಐವರ ಮೇಲೆ ವರದಕ್ಷಿಣೆ ಕಿರುಕುಳ, ಮಾನಹಾನಿ, ಮೋಸ, ವಂಚನ ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣದ ಕಲ್ಯಾಣ ಮಂಟಪವೊಂದರಲ್ಲಿ ಭಾನುವಾರ ತಾಲ್ಲೂಕಿನ ಯುವತಿಯೊಬ್ಬರ ವಿವಾಹವು ತುಮಕೂರು ಜಿಲ್ಲೆಯ ಯುವಕನೊಂದಿಗೆ ನಡೆಯಬೇಕಿತ್ತು. ಶನಿವಾರ ಸಂಜೆ ತುಮಕೂರಿನಿಂದ ವರನ ಕಡೆಯವರು ಮಂಟಪಕ್ಕೆ ಬಂದಿದ್ದು, ರಾತ್ರಿಯ ಊಟದಲ್ಲಿ ಸಿಹಿತಿಂಡಿ ಇಲ್ಲ ಎಂಬ ಕಾರಣಕ್ಕೆ ವಿಚಾರಕ್ಕೆ ಗಲಾಟೆ ಆರಂಭವಾಯಿತು. ಮಂಟಪದಲ್ಲಿಯೇ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಭಾನುವಾರ ಬೆಳಿಗ್ಗೆ ಅಂತಿಮವಾಗಿ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಬೇಸರಗೊಂಡ ವಧು ಮದುವೆಯೇ ಬೇಡ ಎಂದು ಪೊಲೀಸರೆದುರು ಹೇಳಿಕೆ ನೀಡಿದಳು.