ವಿರಾಜಪೇಟೆ (ಕೊಡಗು ಜಿಲ್ಲೆ): ದಕ್ಷಿಣ ಕೊಡಗಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ಯಾಂಟೀನ್ ನಡೆಸುತ್ತಿದ್ದ ಸೂರ್ಯಕಾಂತ್ ಮೊಹಂತಿ ಎಂಬಾತನನ್ನು ಗಾಂಜಾ ಮಾರಾಟ ಆರೋಪದ ಮೇರೆಗೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 6.5 ಕೆ.ಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
‘ಒಡಿಶಾ ರಾಜ್ಯದವನಾದ ಆರೋಪಿಯು ಪಟ್ಟಣದಲ್ಲಿ ಗೋಬಿ ಮಂಚೂರಿ (ಫಾಸ್ಟ್ ಫುಡ್) ಮಳಿಗೆಯೊಂದನ್ನು ನಡೆಸುತ್ತಿದ್ದ. ಜತೆಗೆ, ಪ್ರತಿಷ್ಠಿತ ಕಾಲೇಜುಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ಯಾಂಟೀನ್ ಸಹ ನಡೆಸುತ್ತಿದ್ದ. ಖಚಿತ ಮಾಹಿತಿ ಆಧಾರಿಸಿ ಸಮೀಪದ ಪೆರುಂಬಾಡಿ ಬಳಿ ಆರೋಪಿಯ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 3 ಕೆ.ಜಿಯಷ್ಟು ಗಾಂಜಾ ಪತ್ತೆಯಾಗಿದೆ. ಬಳಿಕ ಆರೋಪಿಯ ಫಾಸ್ಟ್ಫುಡ್ ಮಳಿಗೆಯನ್ನು ಪರಿಶೀಲಿಸಿದಾಗ 3.5 ಕೆ.ಜಿಯಷ್ಟು ಗಾಂಜಾ ಪತ್ತೆಯಾಯಿತು’ ಎಂದು ಪೊಲೀಸರು ಹೇಳಿದ್ದಾರೆ.
ಗಾಂಜಾವನ್ನು ಪ್ಯಾಕೇಟ್ ಮಾಡಲು ಬಳಸುತ್ತಿದ್ದ ಪ್ಲಾಸ್ಟಿಕ್ ಕವರ್, ಕತ್ತರಿ ಹಾಗೂ ತೂಕ ಮಾಡುವ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. ₹ 1.5 ಲಕ್ಷ ಮೌಲ್ಯದ 6.5 ಕೆ.ಜಿಯಷ್ಟು ಗಾಂಜಾ, ಒಂದು ಕಾರು, ₹ 1,200 ನಗದು, 2 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯು ಒಡಿಶಾದಿಂದ ಗಾಂಜಾವನ್ನು ತಂದು ಕೇರಳದವರಿಗೆ ಹಾಗೂ ತನ್ನ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.
ಸಿಪಿಐ ಶಿವರುದ್ರ, ಸಬ್ಇನ್ಸ್ಪೆಕ್ಟರ್ಗಳಾದ ಶ್ರೀಧರ್, ಮುತ್ತಣ್ಣ, ಮಂಜುನಾಥ್, ಸಿಬ್ಬಂದಿಯಾದ ಗಿರೀಶ್, ಮುಸ್ತಾಫ, ಧರ್ಮ, ಸತೀಶ ಹಾಗೂ ಶೆಟ್ಟಪ್ಪ ಕಾರ್ಯಚರಣೆ ತಂಡದಲ್ಲಿದ್ದರು.