ಕುಶಾಲನಗರ (ಕೊಡಗು ಜಿಲ್ಲೆ): ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಸತೀಶ್ (40) ಅವರು ಇಲ್ಲಿನ ಆನೆಕಾಡು ಸಮೀಪ ಕಾರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
‘ಮಂಡ್ಯ ಜಿಲ್ಲೆಯ ಶಿವಳ್ಳಿಯ ಅವರು ಬೆಳಿಗ್ಗೆ ಆಸ್ಪತ್ರೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದರು. ನಂತರ, ಅವರು ಕಾರಿನಲ್ಲಿ ಮಡಿಕೇರಿ ಕಡೆಗೆ ಹೊರಟಿದ್ದರು. ಮಧ್ಯಾಹ್ನದ ವೇಳೆ ಆನೆಕಾಡು ಸಮೀಪ ರಸ್ತೆಬದಿ ನಿಲ್ಲಿಸಿದ್ದ ಕಾರಿನಲ್ಲಿ ವಿಷದ ಇಂಜೆಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಪತಿ ದೀರ್ಘ ಕಾಲದ ಬೆನ್ನುನೋವಿನಿಂದ ಬಳಲುತ್ತಿದ್ದರು. ಹುದ್ದೆಯೂ ಕಾಯಂಗೊಂಡಿರಲಿಲ್ಲ. ಪುತ್ರನಿಗೆ ಅನಾರೋಗ್ಯವಿತ್ತು. ಹೀಗಾಗಿ, ಸುಮಾರು 6 ತಿಂಗಳುಗಳಿಂದ ಇವರು ಖಿನ್ನತೆಗೆ ಒಳಗಾಗಿದ್ದರು’ ಎಂದು ಮೃತ ಸತೀಶ್ ಅವರ ಪತ್ನಿ ಹೇಳಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹ ಪತ್ತೆಯಾಗುತ್ತಲೇ ಹೆಣ್ಣು ಭ್ರೂಣ ಪತ್ತೆ ಪ್ರಕರಣಕ್ಕೂ ಈ ಪ್ರಕರಣಕ್ಕೂ ಸಂಬಂಧ ಇದೆ ಎಂಬ ಸುದ್ದಿಗಳು ಹರಿದಾಡಿದವು. ಈ ಕುರಿತು ‘ಪ್ರಜಾವಾಣಿ’ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರನ್ನು ಸಂಪರ್ಕಿಸಿದಾಗ, ‘ವೈದ್ಯರ ಆತ್ಮಹತ್ಯೆ ಪ್ರಕರಣ ತನಿಖಾ ಹಂತದಲ್ಲಿದೆ. ಈ ಕುರಿತು ಹೆಚ್ಚೇನೂ ಹೇಳಲು ಸಾಧ್ಯವಿಲ್ಲ’ ಎಂದರು.
ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.