ಸೋಮವಾರಪೇಟೆ: ಸಮೀಪದ ಶಾಂತಳ್ಳಿ ಹೋಬಳಿಯ ಬೆಟ್ಟದಕೊಪ್ಪ ಗ್ರಾಮದಲ್ಲಿ ಆಸ್ತಿ ವಿವಾದ ಹಿನ್ನೆಲೆಯಲ್ಲಿ ಮಾವನೇ ಸೊಸೆಗೆ ಗುಂಡಿಕ್ಕಿರುವ ಘಟನೆ ಗುರುವಾರ ನಡೆದಿದೆ.
ತೀರ್ಥ (36) ಗಾಯಗೊಂಡವರು. ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಹಸುವನ್ನು ಹೊರಗೆ ಕಟ್ಟುವ ವಿಚಾರಕ್ಕೆ ಮಾವ ಮತ್ತು ಸೊಸೆ ನಡುವೆ ಮಾತಿನ ಚಕಮಕಿ ನಡೆದಿದೆ.
ಕೋಪಗೊಂಡ ಅಯ್ಯಪ್ಪ ಅವರು ಮನೆಯಲ್ಲಿದ್ದ ಒಂಟಿನಳಿಕೆ ಕೋವಿಯಿಂದ ಗುಂಡು ಹಾರಿಸಿದ್ದಾರೆ. ಎಡ ಎದೆಯ ಭಾಗ ಹಾಗೂ ಪಕ್ಕೆಗೆ ಗಾಯಗೊಂಡಿರುವ ತೀರ್ಥ ಅವರನ್ನು ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ನನ್ನ ಅಪ್ಪನೇ ಹೆಂಡತಿಗೆ ಗುಂಡು ಹೊಡೆದಿದ್ದಾರೆ’ ಎಂದು ತೀರ್ಥ ಅವರ ಪತಿ ಹೂವಯ್ಯ ನೀಡಿದ ದೂರಿನ ಅನ್ವಯ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದಾನೆ.