ಮಡಿಕೇರಿ: ಕೊಡಗು ಜಿಲ್ಲೆಯ ಘಟ್ಟ ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಇಲ್ಲಿನ ಹಾರಂಗಿ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ 3ಸಾವಿರ ಕ್ಯೂಸೆಕ್ ದಾಟಿದೆ. ನಾಪೋಕ್ಲು ಸಮೀಪದ ಬಲಮುರಿ ಗ್ರಾಮದ ಕಿರುಸೇತುವೆ ಭಾನುವಾರ ಮುಳುಗಡೆಯಾಗಿದೆ. ದೊಡ್ಡ ಸೇತುವೆ ಇರುವುದರಿಂದ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ.
ಪೊನ್ನಂಪೇಟೆ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಮಳೆಯಿಂದ ಅಡಕೆ ಮರ ಉರುಳಿ ಬಿದ್ದು ವಿದ್ಯುತ್ ತಂತಿಗಳು ತುಂಡಾಗಿ ಐದು ಹಸುಗಳು ಮೃತಪಟ್ಟಿವೆ.
ಹಾರಂಗಿ ಜಲಾಶಯಕ್ಕೆ ಭಾನುವಾರ 3,156 ಕ್ಯೂಸೆಕ್ ಒಳ ಹರಿವಿತ್ತು. ಭಾಗಮಂಡಲ ಹೋಬಳಿ ವ್ಯಾಪ್ತಿಯಲ್ಲಿ ಹಾಗೂ ಘಟ್ಟ ಪ್ರದೇಶಗಳಲ್ಲಿ ಶನಿವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ಸರಾಸರಿ 11 ಸೆಂ.ಮೀ.ನಷ್ಟು ಮಳೆ ದಾಖಲಾಗಿದೆ. ಗೋಣಿಕೊಪ್ಪಲು ಭಾಗದಲ್ಲೂ ಭಾರಿ ಮಳೆಯಾಗಿದೆ. ಮಡಿಕೇರಿ ನಗರದಲ್ಲೂ ಮಳೆ ಮುಂದುವರಿದಿದೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಮತ್ತೂರು ಗ್ರಾಮದಲ್ಲಿ ಮಳೆಯಿಂದ ಅಡಕೆ ಮರವೊಂದು ಉರುಳಿದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿ ಬಿದ್ದು ಹಸು ಮೃತಪಟ್ಟಿದೆ