ಶನಿವಾರಸಂತೆ: ಕೊಡ್ಲಿಪೇಟೆ ಸಮೀಪದ ದೊಡ್ಡಭಂಡಾರ ಗ್ರಾಮದಲ್ಲಿ ಸಂಭ್ರಮ ಕೆನೆಗಟ್ಟಿದೆ. 45 ವರ್ಷಗಳಿಂದ ತೆರೆಮರೆಗೆ ಸರಿದಿದ್ದ ಪುರಾತನ ದೇವಾಲಯವೊಂದನ್ನು ಗ್ರಾಮಸ್ಥರು ಜೀರ್ಣೋದ್ಧಾರ ಮಾಡಿದ್ದು, ಅದರ ಉದ್ಘಾಟನಾ ವಿಧಿಗಳು ಭಾನುವಾರದಿಂದ ಆರಂಭವಾಗಲಿವೆ.
ಕೊಡಗಿನ ರಾಜವಂಶಸ್ಥರಾದ ಲಿಂಗರಾಜು ಒಡೆಯರ ಕಾಲದಲ್ಲಿ ಪ್ರಾರಂಭವಾಗಿತ್ತು ಎಂದು ಹೇಳಲಾದ ಮಲ್ಲೇಶ್ವರ ದೇವಾಲಯ ನಂತರ ಶಿಥಿಲಗೊಂಡು, ಪೂಜಾ ಕೈಂಕರ್ಯಗಳೂ ನಿಂತು ಹೋಗಿದ್ದವು.
ಗ್ರಾಮಸ್ಥರು, ಹಿರಿಯರು ಒಟ್ಟು ಸೇರಿ ಮಲ್ಲೇಶ್ವರ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡಲು ತೀರ್ಮಾನಿಸಿ, 2021ರಲ್ಲಿ ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿಯನ್ನು ರಚಿಸಿಕೊಂಡರು. ದೇವಾಲಯದ ನಿರ್ಮಾಣಕ್ಕೆ ಗ್ರಾಮಸ್ಥರೂ ಸರ್ವವಿಧದಿಂದಲೂ ಕೈಜೋಡಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ₹ 2 ಲಕ್ಷ, ಕರ್ನಾಟಕ ಸರ್ಕಾರದ ಅನುದಾನದಲ್ಲಿ ₹ 2.5 ಲಕ್ಷ ಸೇರಿದಂತೆ ಒಟ್ಟು ₹ 35 ಲಕ್ಷದಲ್ಲಿ ಸುಂದರವಾದ ದೇವಾಲಯವನ್ನು ನಿರ್ಮಿಸಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರ ಇಂದಿನಿಂದ: ಮಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮವು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ಗಂಗಸ್ಥಾನ, ಸಮಸ್ತ ಕಾಮದೇವ ಪೂಜೆ, ಆಲಯ ಪೂಜೆ, ನಂದಾದೀಪ ಆರಾಧನೆ ಗಣಪತಿ ಪೂಜೆಗಳು ನಡೆಯಲಿವೆ.
ಫೆ. 12ರಂದು ಬ್ರಾಹ್ಮಿ ಮುಹೂರ್ತದಲ್ಲಿ ಮುಂಜಾನೆ 4.30ರಿಂದ ಗಣಪತಿ ಪೂಜೆ 2.5 ಅಡಿ ಎತ್ತರದ ಮಲ್ಲೇಶ್ವರ ಸ್ವಾಮಿಯ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ, ಗಣಪತಿ ಮತ್ತು ಸುಬ್ರಹ್ಮಣ್ಯ ದೇವರಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತದೆ. ಬಳಿಕ, ರುದ್ರಾಭಿಷೇಕ, ಮೊದಲಾದ ಪೂಜಾಕೈಂಕರ್ಯಗಳು ನೆರವೇರಲಿವೆ.
ಕಿರು ಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯವನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಶ್ರೀ ಮಲ್ಲೇಶ್ವರ ದೇವಾಲಯ ಸಮಿತಿಯವರು ಏರ್ಪಡಿಸಿದ್ದಾರೆ.
ಧಾರ್ಮಿಕ ಸಮಾರಂಭ: ಫೆ.12ರಂದು ಸೋಮವಾರ ಮಧ್ಯಾಹ್ನ 2.30ರಿಂದ ಹಾಸನದ ಆದಿಚುಂಚನಗಿರಿ ಮಹಾಸಂಸ್ಥಾನದ ಶಂಭುನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಶ್ರೀ ತಪೋ ಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ಗೌಡ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಡಿ.ಎಚ್.ಶಿವರಾಮೇಗೌಡ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ದಾನಿಗಳಾದ ಹರಪಳ್ಳಿ ರವೀಂದ್ರ, ಮಾಜಿ ಶಾಸಕರಾದ ಎಂ ಪಿ ಅಪ್ಪಚ್ಚು ರಂಜನ್, ಕೊಡ್ಲಿಪೇಟೆ ಶಿಲ್ಪಿ ಎಸ್ ಎಸ್ ವರಪ್ರಸಾದ್, ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೋಹಿತ್ ಭಾಗವಹಿಸಲಿದ್ದಾರೆ.
8 ವೀರಗಲ್ಲುಗಳ ಜೊತೆಗೆ ಶಿವಲಿಂಗವೂ ಗ್ರಾಮದಲ್ಲಿದೆ ಅನೇಕ ಐತಿಹಾಸಿಕ ಕಥೆಗಳನ್ನು ಹೊಂದಿರುವ ಗ್ರಾಮ ಕೊಡಗಿನ ಗಡಿಭಾಗದಲ್ಲಿದೆ ಅಪರೂಪದ ಗ್ರಾಮ
ಗ್ರಾಮವು ಅತಿ ಪುರಾತನ ಇತಿಹಾಸ ಹೊಂದಿದೆ. ಸುಮಾರು 8 ವೀರಗಲ್ಲುಗಳು ಇಲ್ಲಿವೆ. ದೊಡ್ಡ ಶಿವಲಿಂಗವೂ ಇದೆ.ಡಿ.ಟಿ.ಶೇಷೇಗೌಡ ಮಲ್ಲೇಶ್ವರ ದೇವಾಲಯ ಸಮಿತಿ ಕಾರ್ಯದರ್ಶಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.