ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು, ಅಕಾಲಿಕ ಮಳೆಯಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋಡ ಕವಿದ ವಾತಾವರಣ, ಧಾರಾಕಾರ ಮಳೆಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ.
ಕೊಯ್ಲು ಮಾಡದೆ ಗಿಡದಲ್ಲಿಯೇ ಉಳಿದಿರುವ ರೋಬಸ್ಟಾ ಕಾಫಿ ನೆಲಕ್ಕೆ ಉದುರುತ್ತಿದೆ. ಇನ್ನು ಕೊಯ್ಲು ಮಾಡಿರುವ ಕಾಫಿಯನ್ನು ಒಣಗಿಸುವುದು ಕಷ್ಟವಾಗಿದೆ. ಒಣಗಲು ಹಾಕಿದ ಕಾಫಿ, ಮಳೆಗೆ ನೆನೆದು ಕೊಳೆಯುತ್ತಿದೆ. ಬೆಳೆಗಾರರಿಗೆ ಅಪಾರ ನಷ್ಟವಾಗಿದೆ.
ಈ ಬಾರಿಯ ಕಾಫಿ ಕೊಯ್ಲಿಗೆ ಕಾರ್ಮಿಕರ ಕೊರತೆಯಾಗಿದೆ. ಲಾಕ್ಡೌನ್ ವೇಳೆ ಊರಿಗೆ ತೆರಳಿದ್ದ ಕಾರ್ಮಿಕರು ವಾಪಸ್ ಬಂದಿಲ್ಲ. ಸ್ಥಳೀಯವಾಗಿಯೂ ಕಾರ್ಮಿಕರು ಸಿಗುತ್ತಿಲ್ಲ. ಹೀಗಾಗಿ, ಕೊಯ್ಲು ವಿಳಂಬವಾಗುತ್ತಿದೆ ಎನ್ನುತ್ತಾರೆ ಬೆಳೆಗಾರರು.
‘ದಿಢೀರ್ ಮಳೆ ಸುರಿದರೆ ಒಣಗಲು ಹಾಕಿದ ಕಾಫಿ ಸಂರಕ್ಷಿಸಲು ಸಾಧ್ಯವಾಗುವುದಿಲ್ಲ. ಕಾಫಿಯ ಗುಣಮಟ್ಟವು ಕುಸಿದರೆ ಉತ್ತಮ ಧಾರಣೆ ಸಹ ಸಿಗುವುದಿಲ್ಲ. ತೇವಾಂಶವಿದ್ದರೆ ವ್ಯಾಪಾರಸ್ಥರು ಖರೀದಿಸುವುದಿಲ್ಲ. ಅಕಾಲಿಕ ಮಳೆಯಿಂದ ಅವಧಿಗೂ ಮೊದಲೇ ಕಾಫಿ ಹೂವು ಅರಳುವ ಸಾಧ್ಯತೆಯೂ ಇದೆ’ ಎಂದು ಸೋಮವಾರಪೇಟೆಯ ಗಿರೀಶ್ ನೋವು ತೋಡಿಕೊಳ್ಳುತ್ತಾರೆ.