ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಂಪೇಟೆ | ಸಿಗದ ಹುಲಿ ನೆಲೆ, ಕಾರ್ಯಾಚರಣೆ ಚುರುಕು

ಜಾನುವಾರುಗಳ ಮೇಲೆ ನಿರಂತರ ಹುಲಿ ದಾಳಿ: ಮತ್ತಿಗೋಡು ಸಾಕಾನೆಗಳ ಬಳಕೆ
Last Updated 19 ಮೇ 2020, 11:12 IST
ಅಕ್ಷರ ಗಾತ್ರ

ಪೊನ್ನಂಪೇಟೆ (ಕೊಡಗು): ಪೊನ್ನಂಪೇಟೆ, ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಕುರಿತ ನಿರಂತರ ಪ್ರಕರಣಗಳಿಂದಾಗಿ ಹುಲಿ ಸೆರೆಗೆ 20 ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದರೂ, ಫಲಪ್ರದವಾಗಿಲ್ಲ.

ಎರಡು ದಿನಗಳಿಂದ ಬೆಳ್ಳೂರು ಗ್ರಾಮ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಆದರೆ, ಹುಲಿ ಜಾಡು ಪತ್ತೆಯಾಗಿಲ್ಲ.

‘ಭಾರತೀಯ ವನ್ಯಜೀವಿ ಸಂಸ್ಥೆಯ ವನ್ಯಜೀವಿ ತಜ್ಞ ಡಾ.ಸನತ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಹಲವು ತಜ್ಞರೂ ಇದ್ದು ವೈಜ್ಞಾನಿಕವಾಗಿ ಹುಲಿ ಸೆರೆ ಹಿಡಿಯಲು ಕಾರ್ಯತಂತ್ರ ರೂಪಿಸಲಾಗಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಹುಲಿ ದಾಳಿಗೆ ಜಾನುವಾರುಗಳು ಬಲಿಯಾಗಿದ್ದ ಕುಮಟೂರು, ನಡಿಕೇರಿ, ತೂಚಮಕೇರಿ ಹಾಗೂ ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಬೋನು ಇಟ್ಟಿದ್ದರು, ಯಶ ಸಿಕ್ಕಿರಲಿಲ್ಲ. ಹೀಗಾಗಿ, ಅರಣ್ಯ ಇಲಾಖೆಯ ಸಿಬ್ಬಂದಿಯು ಹುಲಿಯ ಇರುವಿಕೆಯನ್ನು ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ನಿರ್ಧರಿಸಿದ್ದಾರೆ.

ಸ್ಥಳೀಯರ ಮಾಹಿತಿ ಆಧರಿಸಿ, ಕೆಲವೆಡೆ ಕಾರ್ಯಾಚರಣೆಗೆ ಮತ್ತಿಗೋಡು ಸಾಕಾನೆಗಳನ್ನೂ ಬಳಸಲಾಗುತ್ತಿದೆ. ಸೋಮವಾರ ಕುಮಟೂರು, ಬೆಳ್ಳೂರು ಗ್ರಾಮಗಳಲ್ಲಿ ಕಾರ್ಯಾಚರಣೆ ನಡೆದಿದ್ದು, 50 ಸಿಬ್ಬಂದಿ ಪಾಲ್ಗೊಂಡಿದ್ದರು.

ರಾತ್ರೋರಾತ್ರಿ ಹುಲಿ ದಾಳಿ:ಕಳೆದ ಕೆಲವು ತಿಂಗಳಿಂದ ದಕ್ಷಿಣ ಕೊಡಗು ಭಾಗದಲ್ಲಿ ನಿರಂತರವಾಗಿ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಹಾಲು ಮತ್ತು ಉಳುಮೆಗೆ ಸಾಕಿಕೊಂಡಿದ್ದ ಜಾನುವಾರುಗಳೂ ಸೇರಿ ನೂರಕ್ಕೂ ಹೆಚ್ಚು ಜಾನುವಾರುಗಳು ಬಲಿಯಾಗಿವೆ. ಆದಷ್ಟು ಬೇಗ ಹುಲಿ ಸೆರೆ ಹಿಡಿಯಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಅರಣ್ಯದಂಚಿನ ಗ್ರಾಮಗಳಲ್ಲಿ ಅಳವಡಿಸಿದ್ದ ಕ್ಯಾಮೆರಾಗಳಲ್ಲಿ ಕಳೆದು ತಿಂಗಳು ಹುಲಿ ಓಡಾಟ ದಾಖಲಾಗಿತ್ತು. ಆದರೆ, ಕಾರ್ಯಾಚರಣೆಗೆ ಫಲ ಸಿಗುತ್ತಿಲ್ಲ.

ವನ್ಯಜೀವಿ ವಿಭಾಗದ ಎಸಿಎಫ್ ಶ್ರೀಪತಿ, ವಿರಾಜಪೇಟೆ ಡಿಎಫ್‍ಒ (ಪ್ರಭಾರ) ರೋಶನಿ, ಪೊನ್ನಂಪೇಟೆ ಆರ್‌ಎಫ್‌ಒ ತೀರ್ಥ ಅವರೂ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT